ಬುಧವಾರ, ಜೂನ್ 1, 2011

ಪತ್ರಿಕೆ ಪ್ರಕಟಿಸಿದ ನನ್ನ ಮೊದಲ ಕವನ

ಶೂದ್ರ ಪತ್ರಿಕೆ ಮೊದಲ ಬಾರಿಗೆ ಈ ರಚನೆಯನ್ನು 1984ಕ್ಕೂ ಮೊದಲು ಪ್ರಕಟಿಸಿತು. ಇದಕ್ಕೂ ಮೊದಲು ಕಾಲೇಜ್ ವಾರ್ಷಿಕ ಸಂಚಿಕೆಯಲ್ಲಿ `ನಾನು ಮತ್ತು ಕಾಂಪೌಂಡನೊಳಗಿನ ಮರ' ಮತ್ತು ರವಿ ಉಪಾಧ್ಯೆ ಸಂಪಾದಿಸುತ್ತಿದ್ದ ನಾಡೋಜ ಪತ್ರಿಕೆಯಲ್ಲಿ `ಸ್ವಾತಂತ್ರ್ಯೋತ್ಸವ : 1977' ಎಂಬ ರಚನೆಗಳು ಪ್ರಕಟವಾಗಿದ್ದ ನೆನಪು. ಇವೆರಡೂ ರಚನೆಗಳ ಪ್ರಕಟನೆಯಲ್ಲಿ ಗುರುಗಳಾಗಿದ್ದ ವೇಣುಗೋಪಾಲ ಸೊರಬ ಅವರ ಬೆಂಬಲ ಮತ್ತು  ಪ್ರಯತ್ನವಿತ್ತು. ಕಾಲೇಜಿನ ವಾರ್ಷಿಕ ಸಂಚಿಕೆಯ ಸಂಆದಕ ಮಂಡಳಿಯಲ್ಲಿ ಅವರಿದ್ದರು. ಅಲ್ಲದೆ ರವಿ ಉಪಾಧ್ಯೆ ಅವರ ಗೆಳೆಯರಿದ್ದರು.
ಒಂದೂ ಎಲೆಯಿಲ್ಲದ ಮತ್ತು ಹೂಗಳಿಂದ ಮಾತ್ರ ತುಂಬಿರುವ ಮರ ತನ್ನ ಕಾಂಪೌಂಡಿನೊಳಗಿರಬೇಕೆಂದು ಬಯಸಿದ ನಿರೂಪಕ ಎಲೆಗಳನ್ನೆಲ್ಲ ಒಂದೂ ಬಿಡದೆ ಕಿತ್ತು ಹಾಕಿದಂತೆಲ್ಲ  ಅವು ಮತ್ತೆ ಚಿಗುರಿ ಮತ್ತೆ ಕಿತ್ತು ತನ್ನ ಕನಸು ಸಾಕಾರಗೊಳಿಸಿಕೊಳ್ಳಲು ಸೋಲುವ  ಚಿತ್ರವಿದ್ದ ರಚನೆ ಅದು. ವ್ಯಕ್ತಿ ತನ್ನ ಜೀವನದಲ್ಲಿ ಪ್ರಾಕೃತಿಕ ನಿಯಮ ಮೀರಿದ ಆದರ್ಶ ಮತ್ತು ಕನಸುಗಳನ್ನು ಹೊಂದಿದ್ದಲ್ಲಿ ಅದು ಕೈಗೂಡದೆ ಅವನ ಜೀವನ ವಿಷಾದದಿಂದ ತುಂಬಿಹೋಗುತ್ತದೆ ಎಂಬ ಆಶಯವಿದ್ದ ರಚನೆಯಂತೆ ಇಂದು ನನಗೆ ತೋರುತ್ತದೆ.
ಆನೆಯನ್ನು ಬೆದರಿಕೆ ಮತ್ತು ಆಸೆಗಳ ಮೂಲಕ ಖೆಡ್ಡಾದೊಳಗೆ ಬೀಳಿಸುವ ಚಿತ್ರವನ್ನು ಕಟ್ಟಿಕೊಟ್ಟಿದ್ದ ರಚನೆ `ಸ್ವಾತಂತ್ರ್ಯೋತ್ಸವ : 1977'. ತುರ್ತು ಪರಿಸ್ಥಿತಿಯಿದ್ದ ಅಂದಿನ  ಸಂದರ್ಭದಲ್ಲಿ ಆನೆಯನ್ನು ಸ್ವತಂತ್ರ ಪ್ರವೃತ್ತಿಯ ಪ್ರತೀಕವಾಗಿರಿಸಿ ಸ್ವಾತಂತ್ರ್ಯೋತ್ಸವದ ವೈರುಧ್ಯವನ್ನು ಕಟ್ಟಕೊಟ್ಟಿದ್ದ ಪ್ರಭುತ್ವ ವಿರೋಧಿ ಆಶಯವುಳ್ಳ ಬರವಣಿಗೆ ಇದು. ಇವೆರಡೂ ಅಂದಿನ ನನ್ನ ಗದ್ಯಮಯ ಶೈಲಿಯಲ್ಲಿ ಬರೆದದ್ದು.  
ನಂತರ ಪ್ರಕಟವಾದದ್ದು ಈ ರಚನೆ. ಮೊದಲ ಸಂಕಲನದಲ್ಲಿರುವ ಇದನ್ನು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ನಿಮ್ಮ ಮುಂದೆ ಇರಿಸುತ್ತಿದ್ದೇನೆ.

#




ಒಂದು ಮಾತು




ಬೇಡವೆನ್ನುವ ಒಪ್ಪಿತ ನಿರ್ಣಯವೆ

ಬಲೆ ಮುರಿದು ಹರವಾದ ಬಯಲೊಳಗೆ
ಮನೆ ಉಳಿದು ನೆಲ ಕಾಣದ ಇಂಗಿತವೆ


ತೆಕ್ಕೆಯೊಳಗಿದ್ದೂ ಕುಶಲ ಹೊರಗಿಣುಕುವ
ನುಣುಪಿನೆಳೆ ನೆಯ್ದ ಬಂಧದ ಭೃಂಗವೆ


ತಬ್ಬಿ ಬಾಚುವ ಚಾಚಿದ ಹಸ್ತಲಾಘವವೆ

ಹರಿಯದ ಬಿಗಿಯದ ತುಯ್ತಕ್ಕೆ ಸಿಲುಕಿ
ಉಬ್ಬರವಿಳಿತದಲೇ ಲೀನವಾದ ಬಲವೆ


ಏರೋಪ್ಲೇನಿನೆಳೆತಕ್ಕೆ ಮೇಲೇರಿ
ಬೂಟುಗಾಲಿನ ತುಳಿತಕ್ಕೆ ನಲುಗುವ
ಅಭಂಗ ಸಾಹಸ ಮೆರೆವ ಪ್ರೇಮವೆ


ನಲಿವ ಮುರಿದ ಬಾಗಿಲ ಬೀಗ ಎಷ್ಟು ಭದ್ರ?

ಕೊಂಡಿ ಕಳಚಿದ ಸೋದರ ನೇತ್ರ ಬಂಧ?

ಹೊಡೆದಾಡುವ ಒಡಂಬಡದ ಹಿಡಿತ
ಗ್ರಹಿತವೇ ಇಲ್ಲವೆನ್ನುವಷ್ಟು ಶುಷ್ಕ?


ಈ ವ್ಯವಹಾರದಲಿ ಎತ್ತ ಸಾಗಲೆನುವ
ಪ್ರಶ್ನೆಯೆ ಇಲ್ಲದ ಕುರುಡ ಕೋಲು ಕುಟ್ಟುತ್ತ



ಸವೆದ ದಾರಿಯ ಹೊಳಹು ಸಿಗದಿದ್ದರೇನು
ಕಾಲಿನ ಸವೆತವಾದರೂ ತಿಳಿಯಬೇಡವೆ?
ಅಳತೆಗೆ, ಮಿಂಚುವ ಪ್ರಖರ ಅನಿಸಿಕೆಗೆ?


'ಗಿಣ್ಣು' ಕವನ ಸಂಕಲನದಿಂದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ