ಮಂಗಳವಾರ, ಏಪ್ರಿಲ್ 23, 2013

ಮಗ ಆನಂದ ಬರೆದ ಕವಿತೆ

ಮೈಸೂರಿನ ರಿಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್ ನಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಎಡ್ ಕೋರ್ಸಿನ ಎಂಟನೆಯ ಸೆಮಿಸ್ಟರ್ ನಲ್ಲಿ ಅಧ್ಯಯನ ಮಾಡುತ್ತಿರುವ ನನ್ನ ಮಗ ಆನಂದ  ಕಳೆದ ತಿಂಗಳು ಕೊನೆಯ ವಾರದಲ್ಲಿ ಮನೆಗೆ ಬಂದಿದ್ದ. ಆ ಸಮಯದಲ್ಲಿ ಟಿವಿ ಚಾನೆಲ್‍ ಒಂದರಲ್ಲಿ ಅವನು ಈ ಮೊದಲು ಅರೆ ಬರೆಯಾಗಿ ನೋಡಿದ್ದ ಅಮೀರ್ ಖಾನನ ತಾರೇ ಜಮೀನ್ ಪರ್ ಸಿನಿಮಾ ಬರುತ್ತಿತ್ತು. ಈ ಸಾರಿಯೂ ಅವನಿಗಿದನ್ನು ಮೊದಲಿನಿಂದ ನೋಡಲು ಸಾಧ್ಯವಾಗಲಿಲ್ಲ. ಈ ಸಿನಿಮಾ ಕುರಿತು ಅವನ ಕುತೂಹಲ ಪೂರ್ತಾ ತಣಿಯದೆ ಇದ್ದುದರಿಂದ ಮಾರನೆಯ ದಿನ ಆತ ನೆಟ್ ನಲ್ಲಿ ಇಡಿಯಾಗಿ ನೋಡಿದ. ಆ ನಂತರ ಈ ಕೆಳಗಿನ ಸಾಲುಗಳನ್ನು ಬರೆದನಂತೆ. ಮಾರನೆಯ ದಿನ ಅವನು ಮರಳಿ ಮೈಸೂರಿಗೆ ಹೋಗಬೇಕಿತ್ತು. ಮಧ್ಯಾಹ್ನ ತನ್ನ ಬ್ಯಾಗು ಸಿದ್ಧ ಪಡಿಸಿಕೊಂಡ ನಂತರ ಈ ಪದ್ಯವನ್ನು ನನಗೆ ತೋರಿಸಿದ. ಹೇಗಿದೆ ಎಂದು ಕೇಳಿದ. ಇದನ್ನು ಓದಿದ ನನಗೆ ಅಡಿಗರ ನಿನಗೆ ನೀನೇ ಗೆಳೆಯ ಕವಿತೆ ನೆನಪಾಯಿತು. ಅವನು ಊರಿಗೆ ಹೋದ ಮೇಲೆ ಪದ್ಯ ಕಳಿಸು ಎಂದು ನಾನೇ ಕೇಳಿಕೊಂಡೆ. ಅವನು ಅದನ್ನು ಮತ್ತಷ್ಟು ತಿದ್ದಿ ನನಗೆ ಕಳಿಸಿಕೊಟ್ಟಂತೆ ಅನಿಸಿತು. ಅವನು ಶೃಂಗೇರಿಗೆ ಬಂದಿದ್ದ ಸಂದರ್ಭದಲ್ಲಿ ಎರಡು ಪದ್ಯ ಬರಹ ಮಾಡಿದ್ದ. ಮೈಸೂರಿನಲ್ಲಿ ಒಂದಷ್ಟು ಬರಹ ಮಾಡಿದ್ದ. ಹಾಗಾಗಿ ಅವನು ತನ್ನ ಐದು ರಚನೆಗಳನ್ನು ಕಳಿಸಿದ್ದ. ಅವುಗಳಲ್ಲಿ ಈ ಕೆಳಗಿನ ರಚನೆಗೆ ಒತ್ತಕ್ಷರವಿಲ್ಲದೆ ಬಳಸಿದ್ದ ಸಾಲಿನ ಕೊನೆಯ ಪದಗಳಿಗೆ ಒತ್ತಕ್ಷರ ಹಾಕಿ; ಅಲ್ಲಲ್ಲಿ ಅನಗತ್ಯವಾಗಿ ಅರ್ಧ ವಿರಾಮ ಚಿಹ್ನೆ ಬಳಸಿದ್ದ ಕಡೆ ತೆಗೆದು ಹಾಕಿ, ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಈಗ ನಿಮ್ಮ ಮುಂದಿರಿಸುತ್ತಿದ್ದೇನೆ.


 ಇರು ನಿನ್ನಂತೆ ನೀನು

ನೀನಾಗಿರು ನೀನು 
ನಿನಗೆ ತಿಳಿದಿಲ್ಲ ನಿನಗೆ ನೀನು
ಯೋಚಿಸಬೇಡ ಯಾಕೆ ಹೀಗೆಂದು

ಇರು ನೀನು ನಿನ್ನಂತೆ
ಅದೇ ತರುವುದು ನಿನಗೆ
ನಿನ್ನ ಛಾಪು

ಮುಚ್ಚಬೇಡ ನಿನ್ನ ಕದವ
ನಿನ್ನ ಆ ಯೋಚನಾ-ಲಹರಿ
ಮಾಡೀತು ನಿನ್ನನ್ನು ನಿನ್ನಂತೆ

ಆಲಿಸದಿರು ಬೆಣ್ಣೆಯ ಮಾತುಗಳನ್ನು
ಹೂಡು ಕೊಂಚ ಸಮಯ ನಿನ್ನಲ್ಲಿ
ಸರಿದಾರಿಯಲ್ಲಿ ಬೆಳೆಯುವಲ್ಲಿ
ತೋರಿಸು ಅದೇ ಆ ರಹದಾರಿ
ಯೋಚಿಸದವರಿಗೆ ಆ ಮೂಢರಿಗೆ

ಹಿಡಿಸದಿದ್ದರೆ ಪರವಾಗಿಲ್ಲ
ದೂರದ ಆ ಮಿಂಚಿನ ಕ್ಷಣಗಳು
ಬೇರೆಯವರು ಎಂದಿಗೂ ಬೇರೆಯವರೇ
ಅವರಾಗುವರು ಬೇರೆಯವರು
ಅವರದೇ ದಾರಿ ದಿಕ್ಕಿನಿಂದ

ಯಾಕದಕೆ ಬೇಸರ
ಖುಷಿ ಪಡು ನೀನು
ಅವರಂತಿಲ್ಲ ನಿನ್ನ ಆ ಏಕಾಂಗಿತನವೂ

ಬೆಲೆಕೊಡು ನಿನ್ನ ಇರುವಿಕೆಗೆ
ನಿನ್ನ ಏಕಾಕಿತನಕ್ಕೆ
ಬೆಳೆಸು ಹೆಮ್ಮರ ಎಂದಿಗೂ ಅಳಿಯದಂತೆ

ಎಲ್ಲರಂತಿರುವುದರಲ್ಲೇನಿದೆ ಸುಖ
ಯೋಚಿಸು ನೀನು ನಿನ್ನಂತೆ
ಬದುಕು ಬಾಳು ನಿನಗಿದೆ ನಿನ್ನದೆ ಹೊಸದಾರಿ
-ಆನಂದ

ಶುಕ್ರವಾರ, ಜನವರಿ 25, 2013

ಎಳೆಯ ಜೀವ ಕುರಿತು

ಇಂದಿಗೆ  ಆನಂದನಿಗೆ ಇಪ್ಪತ್ತೊಂದು ತುಂಬಿ ಇಪ್ಪತ್ತೆರಡನೆಯ ವರುಷ ಆರಂಭವಾಗಿದೆ. ಈತ ಎಂಟು ತಿಂಗಳ ಹಾಲುಗೂಸು ಇದ್ದ ಕಾಲದಲ್ಲಿ ಬರೆದ ಸಾಲುಗಳು ಈಗ ನೆನಪಿಗೆ ಬಂದವು. ಅರವಿಂದ ನಾಳೆ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜ ವಂದನೆ ಸಲ್ಲಿಸುವ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾನೆ. ನನ್ನ ಈ ಮಕ್ಕಳು ತಮ್ಮ ಜೀವನದಲ್ಲಿ ಸಮಸ್ತ ಜೀವಿಗಳ ಆರೈಕೆ ಮತ್ತು ಹಾರೈಕೆಯಲ್ಲಿ ಸಾಧನೆಯ ಹಾದಿ ಹಿಡಿದು ಸಾಗಲೆಂದು ಆಶಿಸುವೆ. ಈ ಹೊತ್ತಲ್ಲಿ ಎಳೆಯ ಜೀವ ಕುರಿತ ಸಾಲುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಇವ ಯಾವೂರ ಸೀಮೆಯ ಗರುವಾ


ಇವ ಯಾವೂರ ಸೀಮೆಯ ಗರುವಾ
ಈ ಸುತ್ತು ಎಲ್ಲೂ ಕಂಡಿಲ್ಲವ್ವಾ

ಪುಟುಪುಟು ಓಟ ಯಾವ ಚಿಗರೆಯಾಟ
ಸುಕದ ಸುಸ್ತು, ಇವ ಸಿಗಲಿಲ್ಲ
ಯಾವ ಹಕ್ಕಿ ಕೂಡಿ ಲೊಳಲೊಳ ಮಾತು
ನಂಗೇನೂ ತಿಳಿಯುವಂಗಿಲ್ಲ

ಕುಹುಕುಹು ಕೂಗಲ್ಲ ಸೀಮಾವು ಸಿಹಿಯಲ್ಲ
ನೆಲ್ಲಿಕಾಯಿ ಉಪ್ಪು ಸಪ್ಪೆ
ಚುಕ್ಕಿ ಕಂಗಳಲ್ಲಿ ಕುಲುಕುಲು ನಗುತಾ
ಕುಣಿಸುವನಿವನೇನು ಬೆಪ್ಪೆ?

ನೀರಡಿಕೆ ನೀಗಿಸೊ ಮಳೆ ಗುಡುಗು ಮಿಂಚೇ
ಇವನಾವ ಸೀಮೆಯವ ಹೇಳು
ಅರಸಿ ಅಂಡಲೆವ ಹಾಲು ಬೆಳದಿಂಗಳೇ
ಇವನ ತಡಕುವೆ ಯಾಕೇಳು?

ವಿಲಿವಿಲಿ ನೋವಲ್ಲಿ ಪತರುಗುಟ್ಟಿ ಜೀವ
ಕಂಗೆಟ್ಟು ಕುರುಡಾಗಿತ್ತವ್ವ
ಯಾವ ಹರಕೆ ಒಪ್ಪಿ ಈ ಕಂದ ಹುಟ್ಟಿದನೊ
ನರಕ ನುರ ನುರಕಿದನವ್ವ

0000000000000000


ಏನಂತ ಹೆಸರಿಟ್ಟು ಕೂಗಲವ್ವ?

ಹಾದೀಲಿ ಬಸ್ಸಲ್ಲಿ ಕಂಡಂಥ ಜನರನ್ನ
ಕಂಡಂಗೆ ನಗುತಾನೆ ನನ್ನ ಕಂದ
ತಮ್ಮದೆ ಕೂಸಂತ ಬಿಕ್ಕೊಂಡ ಮಕದಲ್ಲಿ
ಎದೆ ಬಿರಿದು ನಗುತಾರೆ ಇನ್ನು ಚೆಂದ!

ಮುದ್ದು ಮುದ್ದು ಮಗು ಮುದ್ದು ಮುದ್ದು ನಗು
ಕರೆದರೆ ಕರೆದಂಗೆ ಹೋಗವೊಲ್ಲ
ದಿಟ್ಟಿ ನೋಟದಲ್ಲಿ ಮಲ್ಲಿಗೆ ನಗೆ ಚೆಲ್ಲಿ
ಮೊದ್ದುಮಣಿ ನಿಮ್ಮಂತೆ ಅಂತಾನಲ್ಲ

ಚೂಟಿ ಕಂಗಳ ಪುಟ್ಟ ಚೋರ ಹೆಸರೇನು
ಅಂತಾರೆ ಕಂಡ ಕಂಡ ಜನವೆಲ್ಲ
ಅಪ್ಪ ಅವ್ವಂದಿರು ಜೀವದ ಬೊಂಬೆಯೊ
ಹಗಲು ರಾತ್ರಿ ಆಡಿಸುವನಲ್ಲ

ಹೊತ್ತು ಹೊತ್ತಿಗೆ ತುತ್ತು ನಿದ್ದುರೆಯಾಟ
ಮಾಡುತಾನೆ ಚುಕ್ಕಿ ಮಾಟದಂಗೆ
ಮೈಮ್ಯಾಲೆ ಕುಣಿತಾನೆ ಜುಟ್ಟು ಹಿಡಿದೆಳಿತಾನೆ
ಅಂಗಳ ಪೂರ ಬಯಲಾಟದಂಗೆ

ಕೇರಿ ದಾರಿಗೆಲ್ಲ ಇವನೇ ಫಟೇಲ
ಮಣ್ಣಿನ ಬೊಂಬೆ ಅಲ್ಲವೆ ಹೀನ?
ಕರೆದರೆ ಬರಲೊಲ್ಲ ಹಿಡಿದರೆ ಸಿಗಲೊಲ್ಲ
ನೀರಾಟದಲ್ಲೇ  ಪಂಚಪ್ರಾಣ

ಟಾಟಾ ಅಂದರೆ ಬಾ ಅಂತ ಕರಿತಾನೆ
ಈ ಬಾಳ ಬಿಟ್ಟೆಲ್ಲಿ ಹೋಗಲವ್ವ
ನಾ ಬಿಟ್ಟು ಇರಲಾರೆ ಬಿಡದೆ ಹೋಗಲಾರೆ
ಏನಂತ ಹೆಸರಿಟ್ಟು ಕೂಗಲವ್ವ ?