ಮಂಗಳವಾರ, ಏಪ್ರಿಲ್ 23, 2013

ಮಗ ಆನಂದ ಬರೆದ ಕವಿತೆ

ಮೈಸೂರಿನ ರಿಜನಲ್ ಇನ್ ಸ್ಟಿಟ್ಯೂಟ್ ಆಫ್ ಎಜುಕೇಶನ್ ನಲ್ಲಿ ಭೌತಶಾಸ್ತ್ರದಲ್ಲಿ ಎಂಎಸ್ಸಿ ಎಡ್ ಕೋರ್ಸಿನ ಎಂಟನೆಯ ಸೆಮಿಸ್ಟರ್ ನಲ್ಲಿ ಅಧ್ಯಯನ ಮಾಡುತ್ತಿರುವ ನನ್ನ ಮಗ ಆನಂದ  ಕಳೆದ ತಿಂಗಳು ಕೊನೆಯ ವಾರದಲ್ಲಿ ಮನೆಗೆ ಬಂದಿದ್ದ. ಆ ಸಮಯದಲ್ಲಿ ಟಿವಿ ಚಾನೆಲ್‍ ಒಂದರಲ್ಲಿ ಅವನು ಈ ಮೊದಲು ಅರೆ ಬರೆಯಾಗಿ ನೋಡಿದ್ದ ಅಮೀರ್ ಖಾನನ ತಾರೇ ಜಮೀನ್ ಪರ್ ಸಿನಿಮಾ ಬರುತ್ತಿತ್ತು. ಈ ಸಾರಿಯೂ ಅವನಿಗಿದನ್ನು ಮೊದಲಿನಿಂದ ನೋಡಲು ಸಾಧ್ಯವಾಗಲಿಲ್ಲ. ಈ ಸಿನಿಮಾ ಕುರಿತು ಅವನ ಕುತೂಹಲ ಪೂರ್ತಾ ತಣಿಯದೆ ಇದ್ದುದರಿಂದ ಮಾರನೆಯ ದಿನ ಆತ ನೆಟ್ ನಲ್ಲಿ ಇಡಿಯಾಗಿ ನೋಡಿದ. ಆ ನಂತರ ಈ ಕೆಳಗಿನ ಸಾಲುಗಳನ್ನು ಬರೆದನಂತೆ. ಮಾರನೆಯ ದಿನ ಅವನು ಮರಳಿ ಮೈಸೂರಿಗೆ ಹೋಗಬೇಕಿತ್ತು. ಮಧ್ಯಾಹ್ನ ತನ್ನ ಬ್ಯಾಗು ಸಿದ್ಧ ಪಡಿಸಿಕೊಂಡ ನಂತರ ಈ ಪದ್ಯವನ್ನು ನನಗೆ ತೋರಿಸಿದ. ಹೇಗಿದೆ ಎಂದು ಕೇಳಿದ. ಇದನ್ನು ಓದಿದ ನನಗೆ ಅಡಿಗರ ನಿನಗೆ ನೀನೇ ಗೆಳೆಯ ಕವಿತೆ ನೆನಪಾಯಿತು. ಅವನು ಊರಿಗೆ ಹೋದ ಮೇಲೆ ಪದ್ಯ ಕಳಿಸು ಎಂದು ನಾನೇ ಕೇಳಿಕೊಂಡೆ. ಅವನು ಅದನ್ನು ಮತ್ತಷ್ಟು ತಿದ್ದಿ ನನಗೆ ಕಳಿಸಿಕೊಟ್ಟಂತೆ ಅನಿಸಿತು. ಅವನು ಶೃಂಗೇರಿಗೆ ಬಂದಿದ್ದ ಸಂದರ್ಭದಲ್ಲಿ ಎರಡು ಪದ್ಯ ಬರಹ ಮಾಡಿದ್ದ. ಮೈಸೂರಿನಲ್ಲಿ ಒಂದಷ್ಟು ಬರಹ ಮಾಡಿದ್ದ. ಹಾಗಾಗಿ ಅವನು ತನ್ನ ಐದು ರಚನೆಗಳನ್ನು ಕಳಿಸಿದ್ದ. ಅವುಗಳಲ್ಲಿ ಈ ಕೆಳಗಿನ ರಚನೆಗೆ ಒತ್ತಕ್ಷರವಿಲ್ಲದೆ ಬಳಸಿದ್ದ ಸಾಲಿನ ಕೊನೆಯ ಪದಗಳಿಗೆ ಒತ್ತಕ್ಷರ ಹಾಕಿ; ಅಲ್ಲಲ್ಲಿ ಅನಗತ್ಯವಾಗಿ ಅರ್ಧ ವಿರಾಮ ಚಿಹ್ನೆ ಬಳಸಿದ್ದ ಕಡೆ ತೆಗೆದು ಹಾಕಿ, ಸಣ್ಣ ಪುಟ್ಟ ಬದಲಾವಣೆಗಳೊಂದಿಗೆ ಈಗ ನಿಮ್ಮ ಮುಂದಿರಿಸುತ್ತಿದ್ದೇನೆ.


 ಇರು ನಿನ್ನಂತೆ ನೀನು

ನೀನಾಗಿರು ನೀನು 
ನಿನಗೆ ತಿಳಿದಿಲ್ಲ ನಿನಗೆ ನೀನು
ಯೋಚಿಸಬೇಡ ಯಾಕೆ ಹೀಗೆಂದು

ಇರು ನೀನು ನಿನ್ನಂತೆ
ಅದೇ ತರುವುದು ನಿನಗೆ
ನಿನ್ನ ಛಾಪು

ಮುಚ್ಚಬೇಡ ನಿನ್ನ ಕದವ
ನಿನ್ನ ಆ ಯೋಚನಾ-ಲಹರಿ
ಮಾಡೀತು ನಿನ್ನನ್ನು ನಿನ್ನಂತೆ

ಆಲಿಸದಿರು ಬೆಣ್ಣೆಯ ಮಾತುಗಳನ್ನು
ಹೂಡು ಕೊಂಚ ಸಮಯ ನಿನ್ನಲ್ಲಿ
ಸರಿದಾರಿಯಲ್ಲಿ ಬೆಳೆಯುವಲ್ಲಿ
ತೋರಿಸು ಅದೇ ಆ ರಹದಾರಿ
ಯೋಚಿಸದವರಿಗೆ ಆ ಮೂಢರಿಗೆ

ಹಿಡಿಸದಿದ್ದರೆ ಪರವಾಗಿಲ್ಲ
ದೂರದ ಆ ಮಿಂಚಿನ ಕ್ಷಣಗಳು
ಬೇರೆಯವರು ಎಂದಿಗೂ ಬೇರೆಯವರೇ
ಅವರಾಗುವರು ಬೇರೆಯವರು
ಅವರದೇ ದಾರಿ ದಿಕ್ಕಿನಿಂದ

ಯಾಕದಕೆ ಬೇಸರ
ಖುಷಿ ಪಡು ನೀನು
ಅವರಂತಿಲ್ಲ ನಿನ್ನ ಆ ಏಕಾಂಗಿತನವೂ

ಬೆಲೆಕೊಡು ನಿನ್ನ ಇರುವಿಕೆಗೆ
ನಿನ್ನ ಏಕಾಕಿತನಕ್ಕೆ
ಬೆಳೆಸು ಹೆಮ್ಮರ ಎಂದಿಗೂ ಅಳಿಯದಂತೆ

ಎಲ್ಲರಂತಿರುವುದರಲ್ಲೇನಿದೆ ಸುಖ
ಯೋಚಿಸು ನೀನು ನಿನ್ನಂತೆ
ಬದುಕು ಬಾಳು ನಿನಗಿದೆ ನಿನ್ನದೆ ಹೊಸದಾರಿ
-ಆನಂದ

ಶುಕ್ರವಾರ, ಜನವರಿ 25, 2013

ಎಳೆಯ ಜೀವ ಕುರಿತು

ಇಂದಿಗೆ  ಆನಂದನಿಗೆ ಇಪ್ಪತ್ತೊಂದು ತುಂಬಿ ಇಪ್ಪತ್ತೆರಡನೆಯ ವರುಷ ಆರಂಭವಾಗಿದೆ. ಈತ ಎಂಟು ತಿಂಗಳ ಹಾಲುಗೂಸು ಇದ್ದ ಕಾಲದಲ್ಲಿ ಬರೆದ ಸಾಲುಗಳು ಈಗ ನೆನಪಿಗೆ ಬಂದವು. ಅರವಿಂದ ನಾಳೆ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಧ್ವಜ ವಂದನೆ ಸಲ್ಲಿಸುವ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾನೆ. ನನ್ನ ಈ ಮಕ್ಕಳು ತಮ್ಮ ಜೀವನದಲ್ಲಿ ಸಮಸ್ತ ಜೀವಿಗಳ ಆರೈಕೆ ಮತ್ತು ಹಾರೈಕೆಯಲ್ಲಿ ಸಾಧನೆಯ ಹಾದಿ ಹಿಡಿದು ಸಾಗಲೆಂದು ಆಶಿಸುವೆ. ಈ ಹೊತ್ತಲ್ಲಿ ಎಳೆಯ ಜೀವ ಕುರಿತ ಸಾಲುಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

ಇವ ಯಾವೂರ ಸೀಮೆಯ ಗರುವಾ


ಇವ ಯಾವೂರ ಸೀಮೆಯ ಗರುವಾ
ಈ ಸುತ್ತು ಎಲ್ಲೂ ಕಂಡಿಲ್ಲವ್ವಾ

ಪುಟುಪುಟು ಓಟ ಯಾವ ಚಿಗರೆಯಾಟ
ಸುಕದ ಸುಸ್ತು, ಇವ ಸಿಗಲಿಲ್ಲ
ಯಾವ ಹಕ್ಕಿ ಕೂಡಿ ಲೊಳಲೊಳ ಮಾತು
ನಂಗೇನೂ ತಿಳಿಯುವಂಗಿಲ್ಲ

ಕುಹುಕುಹು ಕೂಗಲ್ಲ ಸೀಮಾವು ಸಿಹಿಯಲ್ಲ
ನೆಲ್ಲಿಕಾಯಿ ಉಪ್ಪು ಸಪ್ಪೆ
ಚುಕ್ಕಿ ಕಂಗಳಲ್ಲಿ ಕುಲುಕುಲು ನಗುತಾ
ಕುಣಿಸುವನಿವನೇನು ಬೆಪ್ಪೆ?

ನೀರಡಿಕೆ ನೀಗಿಸೊ ಮಳೆ ಗುಡುಗು ಮಿಂಚೇ
ಇವನಾವ ಸೀಮೆಯವ ಹೇಳು
ಅರಸಿ ಅಂಡಲೆವ ಹಾಲು ಬೆಳದಿಂಗಳೇ
ಇವನ ತಡಕುವೆ ಯಾಕೇಳು?

ವಿಲಿವಿಲಿ ನೋವಲ್ಲಿ ಪತರುಗುಟ್ಟಿ ಜೀವ
ಕಂಗೆಟ್ಟು ಕುರುಡಾಗಿತ್ತವ್ವ
ಯಾವ ಹರಕೆ ಒಪ್ಪಿ ಈ ಕಂದ ಹುಟ್ಟಿದನೊ
ನರಕ ನುರ ನುರಕಿದನವ್ವ

0000000000000000


ಏನಂತ ಹೆಸರಿಟ್ಟು ಕೂಗಲವ್ವ?

ಹಾದೀಲಿ ಬಸ್ಸಲ್ಲಿ ಕಂಡಂಥ ಜನರನ್ನ
ಕಂಡಂಗೆ ನಗುತಾನೆ ನನ್ನ ಕಂದ
ತಮ್ಮದೆ ಕೂಸಂತ ಬಿಕ್ಕೊಂಡ ಮಕದಲ್ಲಿ
ಎದೆ ಬಿರಿದು ನಗುತಾರೆ ಇನ್ನು ಚೆಂದ!

ಮುದ್ದು ಮುದ್ದು ಮಗು ಮುದ್ದು ಮುದ್ದು ನಗು
ಕರೆದರೆ ಕರೆದಂಗೆ ಹೋಗವೊಲ್ಲ
ದಿಟ್ಟಿ ನೋಟದಲ್ಲಿ ಮಲ್ಲಿಗೆ ನಗೆ ಚೆಲ್ಲಿ
ಮೊದ್ದುಮಣಿ ನಿಮ್ಮಂತೆ ಅಂತಾನಲ್ಲ

ಚೂಟಿ ಕಂಗಳ ಪುಟ್ಟ ಚೋರ ಹೆಸರೇನು
ಅಂತಾರೆ ಕಂಡ ಕಂಡ ಜನವೆಲ್ಲ
ಅಪ್ಪ ಅವ್ವಂದಿರು ಜೀವದ ಬೊಂಬೆಯೊ
ಹಗಲು ರಾತ್ರಿ ಆಡಿಸುವನಲ್ಲ

ಹೊತ್ತು ಹೊತ್ತಿಗೆ ತುತ್ತು ನಿದ್ದುರೆಯಾಟ
ಮಾಡುತಾನೆ ಚುಕ್ಕಿ ಮಾಟದಂಗೆ
ಮೈಮ್ಯಾಲೆ ಕುಣಿತಾನೆ ಜುಟ್ಟು ಹಿಡಿದೆಳಿತಾನೆ
ಅಂಗಳ ಪೂರ ಬಯಲಾಟದಂಗೆ

ಕೇರಿ ದಾರಿಗೆಲ್ಲ ಇವನೇ ಫಟೇಲ
ಮಣ್ಣಿನ ಬೊಂಬೆ ಅಲ್ಲವೆ ಹೀನ?
ಕರೆದರೆ ಬರಲೊಲ್ಲ ಹಿಡಿದರೆ ಸಿಗಲೊಲ್ಲ
ನೀರಾಟದಲ್ಲೇ  ಪಂಚಪ್ರಾಣ

ಟಾಟಾ ಅಂದರೆ ಬಾ ಅಂತ ಕರಿತಾನೆ
ಈ ಬಾಳ ಬಿಟ್ಟೆಲ್ಲಿ ಹೋಗಲವ್ವ
ನಾ ಬಿಟ್ಟು ಇರಲಾರೆ ಬಿಡದೆ ಹೋಗಲಾರೆ
ಏನಂತ ಹೆಸರಿಟ್ಟು ಕೂಗಲವ್ವ ?

ಶನಿವಾರ, ಡಿಸೆಂಬರ್ 15, 2012

...............

ಬಂತು - ಎಡೆಬಿಡದೆ ಬಂತು
ಕತ್ತಲು ಬೆಳಕನ್ನು ಹಿಮ್ಮೆಟ್ಟಿ ನಿಂತು
ಕುರುಡು ಪ್ರೇಮದಲ್ಲಿ
ಕುಟುಕು ಮಳೆಯಲ್ಲಿ
ಜೋಡಿ ಹರೆಯದ ಹರುಷದಲ್ಲಿ

ಉಕ್ಕುಕ್ಕಿ ಬಂತು
ಮಲ್ಲಿಗೆ ಸಂಪಿಗೆ ತಾಳೆಗರಿಯಲ್ಲಿ
ಅಡಗಿ ಕುಂತು

ಮೈತಳೆದು ಬಂತು
ಮಣ್ಣಾಗಿದ್ದದ್ದು ಹೊನ್ನಾಗಿ
ವಿಷವಾಗಿದ್ದದ್ದು ರಸವಾಗಿ
ಹೂವಾಗಿದ್ದದ್ದು ಗಮಲಾಗಿ

ಅವರೆಕಾಯಿಯ ಸೊಗಡಾಗಿ
ಮಾವಿನ ಹಣ್ಣಿನ ಸಿಹಿಯಾಗಿ
ಬಯಸುವಂತೆ ಬಂತು
ಬಯಕೆಗಳನ್ನೆಲ್ಲ ತಂತು

oo

ಈ ರಚನೆಯನ್ನು ಸಂಕಲನದಲ್ಲಿ ಸೇರಿಸಿದಾಗ ಏನೊಂದೂ ಹೆಸರಿಸಲು ತಿಳಿಯದೆ ಹೆಸರೊಂದು ಇರಲೆಬೇಕೆಂಬ ಹಟದಲ್ಲಿ  `ಶ್ರಾವಣದ ಮಳೆ' ಎಂದು ಸೂಚಿಸಿದ್ದೆ. ಆದರೆ ಅದು ಸೂಕ್ತವೇನೂ ಆಗಿರಲಿಲ್ಲ. ಚಿಲುಮೆ ಎಂಬರ್ಥದ ಊಟಿ ಎಂಬ ಹೆಸರು ಹೆಚ್ಚು ಒಪ್ಪಬಹುದೆಂದು ಕಾಣುತ್ತದೆ. ಆದರೂ ಹೆಸರಿಲ್ಲದೆಯೆ ಇದು ಹೆಚ್ಚು ಅರ್ಥಪೂರ್ಣ ಅನಿಸಿತು. ಹಾಗಾಗಿ ಇದನ್ನು ಬರೆದಾಗ ಮೂಡಿದ ಸಾಲುಗಳನ್ನು ಯಾವ ಹೆಸರೂ ಸೂಚಿಸದೆ ನಿಮ್ಮ ಮುಂದಿಡುತ್ತಿದ್ದೇನೆ.

ಬುಧವಾರ, ನವೆಂಬರ್ 28, 2012

ಮಲ್ಲಿಗೆಯ ಚಂದ್ರ

ಮಲ್ಲಿಗೆಯ ಚಂದ್ರ
ನಸುನಗುತ ಬಂದ
ಮನಮೋಹ ಹೊತ್ತು ತಂದ

ಇಳಿಮುಖದ ರವಿಯ
ಬೆದರಿಕೆಯ ಇರುಳ
ಅಣಕಿಸುತ ತಂಪು ಕವಿದ

ತಾಳೆಗರಿ ಜಡೆಯ
ಒನೆದಾಡೊ ಮಗುದೆ
ನಡೆದಾಡಿ ಬಳಿಗೆ ಬರುತ

ನಡುವನ್ನೆ ಹಿಡಿದು
ಪರಿಮಳವ ಹರಡಿ
ತೂಗಾಡಿ ತೊನೆದು ಕುಣಿದು

ಬಳಕುತ್ತ ಬಳಸಿ
ಹಿಡಿಯುತ್ತ ಹಿಡಿಸಿ
ನಲಿಯುತ್ತ ಹೆಜ್ಜೆಗೊಲಿಸಿ

ಧೀಂ ಧೀಂ ತಕಿಟ
ತೋಂ ತೋಂ ತಕಿಟ
ಮಣಿವಲ್ಲಿ ಮುಗುಳು ಅರಸಿ

ಬಿದ್ದನೊಬ್ಬ ಕಡೆ
ನಿಂತಳೊಂದು ಕಡೆ
ಅಯ್ಯೊ ಎನುವರಿಲದೆ

ಮಲ್ಲಿಗೆಯ ಚಂದ್ರ
ವಿಷತುಂಬಿ ನಿಂತ
ಮಧುಮಾಸ ಮರೆತು ನಡೆದ

ಶನಿವಾರ, ನವೆಂಬರ್ 10, 2012

ಹೇಳೊ ಹೇಳು

ಅಲ್ಲಮ ನಿನಗೆ ಎಲ್ಲಿಂದ ಬಂತೊ ಆ ಮಿಡಿತ
ಆ ಲತೆ ಹೇಗೆ ಮನಸೋತು ಬಂದಳೊ ಆಗ

ಬವಳಿ ಬಂದು ಮೈಮರೆತು ಹೇಗೆ ಬಿದ್ದಳೊ
ತತುಕ್ಷಣವೆ ಧಿಮಿಗುಡುವ ಮೃದಂಗ ಹಾರಿತೆಲ್ಲಿಗೊ

ಅದೇನು ಕಾತುರ, ಜತೆಜತೆಯ ಆತುರ ಹೀಗೆ?
ಬೆನ್ಬಿಡದೆ ಏಕೆ ಹಿಂಬಾಲಿಸಿದೆ ನೀ ಹಾಗೆ?

ಅರಿಯದೆ ನಿನಗರಿಯದೆ ? ಹೇಳು ಈಗ
ಕಾಮಲತೆ ಜತೆಗೆ ಹೇಗೆ ಹಬ್ಬಿಕೊಂಡೆ ಆಗ?

ಕಡೆಮೊದಲು ಕಾಣದೆ ತಬ್ಬಿ ಉಬ್ಬಿ ನೀವಿದ್ದು
ಮೈದುಂಬಿ ತವಕದುಬ್ಬೇಗದಲ್ಲಿ ಲೋಕ ಮರೆತದ್ದು

ಎಷ್ಟುಸಲ ನೀ ಕಾಲ ಕಳೆದದ್ದು ಎಷ್ಟುಸಲ?
ಆ ಲತೆ ಹೋದರೆ ಅಳುತ ಮೈಮರೆತೆ ಎಷ್ಟುಸಲ?

ಬಿಡದೆ ಬಿಟ್ಟರೂ ಬಿಡದೆ ಕಾಡಿದ್ದು ಎಷ್ಟುಸಲ? 
ಒಂದು ಬಿಟ್ಟು ಮತ್ತೊಂದು ಹುಡುಕಿದುದು ಸುಲಭ ಫಲ?

ಅಲ್ಲಮ ನಿನಗೆ ಎಲ್ಲಿಂದ ಬಂತೊ ಆ ಮಿಡಿತ
ಹೊಸ ಮೆರಗು ಬೆರಗು ಬೆಳೆ ಬೆಳೆದ ಜೀವಸ್ಪಂದ

ಹೇಳೊ ಹೇಳು ನೀ ಏಕಾಏಕಿ ಸಾಧಿಸಿದೆಯೊ ಹೊಸ ಬೆಳಕ?

ಭಾನುವಾರ, ಸೆಪ್ಟೆಂಬರ್ 16, 2012

ಎತ್ತಪ್ಪನ ಕಥನ


ಕಾಡುಗೊಲ್ಲ ಸಮುದಾಯದ ಮೊದಲ ಸಾಂಸ್ಕೃತಿಕ ವೀರ ಎತ್ತಪ್ಪ. ಅತನ ಆಶಯವನ್ನು ನಂತರದಲ್ಲಿ ಜುಂಜಪ್ಪ ಮುನ್ನಡೆಸಿದ್ದಾನೆ. ಕಾಡುಗೊಲ್ಲ ಸಮುದಾಯದಲ್ಲಿ ಇವರ ಕುರಿತು ಹೇಳುವ ಕತೆಗಳು, ಹಾಡುಗಳು, ಗಣೆಕಾವ್ಯಗಳು ಈ ಸಾಂಸ್ಕೃತಿಕ ವೀರನನ್ನು ಪರಿಚಯ ಮಾಡಿಕೊಟ್ಟಿವೆ. ಎತ್ತಪ್ಪನ ಕುರಿತ ಬರಹ ನಾಲ್ಕು ಭಾಗಗಳಲ್ಲಿವೆ.
1. ಶಿವನ ಕೃಪೆಯಿಂದ ಎತ್ತಪ್ಪ ಹಾಗೂ ಆತನ ಸಹಚರ ಮಾರಮುತ್ತಪ್ಪನ ಜನನ. ತುಪ್ಪಾಡಿ ಕಾವಲಿನಲ್ಲಿ ದನ ಮೇಯಿಸಿದ ಎತ್ತಪ್ಪ ಮೇಲುವರ್ಗದ ಆರ್ಥಿಕ ರಾಜಕಾರಣದ ಪರಿಣಾಮವಾಗಿ ಸಂಡೂರು ಕಾವಲಿನಲ್ಲಿ ಸೆರೆ ಬೀಳುವಂತೆ ಮುನಿಗಳಿಂದ ಶಾಪ ಪಡೆಯುವುದು. ಕಳ್ಳಮಡಗು ಕಾವಲಿನಲ್ಲಿ ಸ್ನಾನ ಮಾಡುತ್ತಿದ್ದ ದೇವಕನ್ನಿಕೆಯರೊಂದಿಗೆ ಎತ್ತಪ್ಪ ತುಂಟಾಟ ಆಡುವುದು. ಸಂಡೂರು ಕಾವಲಿನ ಬೇಡರು ಎತ್ತಪ್ಪನ ತಲೆ ತೆಗೆಯಲೆಂದು ಬಸುರಾದ ದೇವಕನ್ನಿಕೆಯರು ಶಾಪ ನೀಡುವುದು. 
2. ಎತ್ತಪ್ಪನ ಮದುವೆ. ಕಾಡುಗೊಲ್ಲ ಸಮುದಾಯದ ಪಶುಪಾಲನ ವೃತ್ತಿಯ ಪಾವಿತ್ರ್ಯತೆಯನ್ನೂ ಆ ವೃತ್ತಿಯ ಆರ್ಥಿಕ ಭದ್ರತೆಯನ್ನೂ ಆತ ರೂಪಿಸುವುದು. ಬೇಡ ಬುಡಕಟ್ಟು ಸಮುದಾಯಗಳಿಂದ ಕಾಡುಗೊಲ್ಲರ ಸ್ವಂತಿಕೆಗೆ ಎದುರಾದ ಸವಾಲುಗಳನ್ನು ಗೆಲ್ಲುವುದು. ತನ್ನನ್ನು ಮೋಹಿಸಿ ಬಂದ ಬೇಡ ನಾರಿಯರನ್ನು ಎತ್ತಪ್ಪ ಓಡಿಸುವುದು. ಅವನನ್ನು ಬೇಡರ ಗುಡ್ಡದ ಬೋರಿ ಹಿಂಬಾಲಿಸುವುದು. ವೈರಿಗಳು ಎಸೆದ ಸವಾಲನ್ನೊಪ್ಪಿಕೊಂಡು ಅವರನ್ನು ಪಗಡೆಯಾಟದಲ್ಲಿ ಎತ್ತಪ್ಪ ಸೋಲಿಸುವುದು. 
3. ಪಶುಪಾಲಕ ಎತ್ತಪ್ಪ ರಾಸುಗಳಿಗೆ ಹುಲ್ಲು ನೀರು ಅರಸುತ್ತ ಸಂಡೂರು ಕಾವಲಿಗೆ ಪಯಣ ಮಾಡುವುದು. ಮಡದಿ ಮಲ್ಲಮ್ಮಳಿಗೆ ತನ್ನ ಜೀವಿತದ ಕುರುಹು ತಿಳಿಸುವುದು. ಗುಡ್ಡದ ಬೋರಿಯ ಕಾಮದ ಬೇಡಿಕೆಯನ್ನು ತಳ್ಳಿಹಾಕುವುದು. ನಿರಾಶಳಾದ ಬೋರಿ ಸಂಡೂರು ಬೊಮ್ಮನನ್ನು ಎತ್ತಪ್ಪನ ವಿರುದ್ಧ ಎತ್ತಿಕಟ್ಟುವುದು. 
4. ಗುಡ್ಡದ ಬೋರಿ ಎತ್ತಪ್ಪನ ವಿರುದ್ಧ ದ್ವೇಷ ಸಾಧನೆ ಮಾಡುವುದು. ಎತ್ತಪ್ಪನ ಸೆರೆ ಹಿಡಿಯಲು ಸಂಡೂರು ಬೊಮ್ಮನಿಗೆ ದಾಸಪ್ಪ ಸಹಾಯ ಮಾಡುವುದು. ಮಾರ ಮುತ್ತಣ್ಣನ ಎಚ್ಚರಿಕೆ ಕಡೆಗಣಿಸಿ ಸಂಡೂರು ಕಾವಲು ಪ್ರವೇಶಿಸಿದ ಎತ್ತಪ್ಪ ವೈರಿಗಳಿಗೆ ಸೆರೆ ಸಿಕ್ಕಿ ಶಿಕ್ಷೆ ಅನುಭವಿಸುವುದು. ಗುಡ್ಡದ ಬೋರಿಯ ಅಪೇಕ್ಷೆಯಂತೆ ಸಂಡೂರು ಬೊಮ್ಮ ದಾಸಯ್ಯನ ಮೂಲಕ ಯತ್ತಪ್ಪನ ತಲೆ ಕತ್ತರಿಸುವುದು.
ಈ ಕಥಾನಕದಲ್ಲಿ ಮುಖ್ಯವಾಗಿ ನಿರೂಪಿತವಾಗಿರುವ ಈ ಸಂಗತಿಗಳು - ಎತ್ತಪ್ಪ ಕಾಡುಗೊಲ್ಲ ಸಮುದಾಯದ ಆರ್ಥಿಕ ಬುನಾದಿಯನ್ನು ಭದ್ರಗೊಳಿಸಿದವನು; ಆ ಮೂಲಕ ಆ ಜನಾಂಗವನ್ನು ಸುಸ್ಥಿತಿಗೆ ಮತ್ತು ಬೆಳವಣಿಗೆಯ ಜಾಡಿಗೆ ತರಲು ಪ್ರಯತ್ನ ಮಾಡಿದವನು ಎಂದೇ ಬೋಧಿಸುತ್ತವೆ. ಈ ಉದ್ದೇಶ ಸಾಧನೆಗೆಂದೆ ಎತ್ತಪ್ಪನ ಜನನವಾಯಿತೆಂಬುದು ಕತೆಯ ನಿರೂಪ. ಈ ಅಂಶ ಕಾಡುಗೊಲ್ಲ ಸಮುದಾಯ ತನ್ನ ಆರಂಭಿಕ ಹಂತದಲ್ಲಿ ಅಂದರೆ, ಎತ್ತಪ್ಪನ ಕಾಲದಲ್ಲಿ ಎದುರಿಸುತ್ತಿದ್ದ ಬಡತನದ ಹೀನಸ್ಥಿತಿಯನ್ನು ಸೂಚಿಸುತ್ತದೆ.  ತನ್ನ ಜನಾಂಗದ ಏಳಿಗೆಗೆ ದುಡಿದ ಎತ್ತಪ್ಪನಿಗೆ ಬೇಡ ಮಹಿಳೆಯರು ಮತ್ತು ಬೇಡ ನಾಯಕರು ವೈರಿಗಳಾಗಿ ಎದುರು ನಿಲ್ಲವರು. ಆದರೂ ಮೇಲುವರ್ಗದ ಮುನಿ ಮತ್ತು ದೇವಕನ್ನಿಕೆಯರು ಅವನ ವಿರುದ್ಧ ದ್ವೇಷ ಸಾಧಿಸುವರು. ಶ್ರಮಹೀನ ವೃತ್ತಿ ಸಮುದಾಯದ ಮುನಿಗಳು ತಮ್ಮ ಸುತ್ತಲ ಪ್ರದೇಶದ ಮೇಲಿನ ತಮ್ಮ ಆಜನ್ಮ ಅಧಿಕಾರವನ್ನು  ಆಧರಿಸಿ, ತಮ್ಮ ಪ್ರದೇಶದಲ್ಲಿ ಬೆಳೆದ ಹಸಿರು ಮೇಯುವ ರಾಸುಗಳ ಉತ್ಪನ್ನದ ಮೇಲೂ ತಮ್ಮ ಹಕ್ಕು ಸ್ಥಾಪಿಸುವರು. ಮುನಿಗಳ ಶ್ರೇಷ್ಟತೆ ಕಲ್ಪನೆಯ ಮೂಲಕವೆ ಎತ್ತಪ್ಪ ತನ್ನ ಆರ್ಥಿಕ ಹಕ್ಕಿಗೆ ಎದುರಾದ ಆತಂಕವನ್ನು ನಿವಾರಿಸಿಕೊಳ್ಳುವನು.  ಬಂಡವಾಳ ಸಾಮ್ರಾಜ್ಯಶಾಹಿ ಪ್ರವೃತ್ತಿಯಲ್ಲಿ ಮುನಿಗಳು ತಮ್ಮ ಸಂಪರ್ಕಕ್ಕೆ ಬಂದವರೆನ್ನೆಲ್ಲ ಆವರಿಸಿಕೊಳ್ಳುವರು. ಇಂಥ ಕ್ರಮಕ್ಕೆ ತಡೆಯೊಡ್ಡುವ ಎತ್ತಪ್ಪ ಆರ್ಥಿಕ ಶೋಷಣೆಯನ್ನೂ ಅದರಿಂದ ತನಗೆ ಉಂಟಾಗುತ್ತಿದ್ದ ನಷ್ಟವನ್ನೂ ತಪ್ಪಿಸಿಕೊಳ್ಳುವನು. ಶ್ರಮ ದುಡಿಮೆಯ ಹಾದಿ ಕಾಣದ ಮುನಿಗಳು ಇದರಿಂದ ಕುಪಿತರಾಗುವರು. ತಮ್ಮ ಕುಟಿಲ ನೀತಿಗೆ ಸೋಲುಣಿಸಿ ಎದುರಾದ ಎತ್ತಪ್ಪನನ್ನು ನಿರ್ನಾಮ ಮಾಡಲು ನಿರ್ಧರಿಸಿ  ಶಾಪ ನೀಡುವರು. ಶಾಪ ಅವರ ಆ ಸಂದರ್ಭದ ಕೇವಲ ಕ್ರೋಪೋದ್ರಿಕ್ತ ಮಾತುಗಳಾಗಿರದೆ ದ್ವೇಷ ಸಾಧನೆಯ ಮೂಲ ಮಂತ್ರವಾಗಿದೆ. ಮುನಿ ಶಾಪದ ಮುಂದುವರೆದ ರೂಪವಾಗಿರುವ ದೇವ ಕನ್ನಿಕೆಯರ ಶಾಪ ಗ್ರಾಮ ದೇವತೆಗೆ ಸಂಬಂಧಿಸಿದಂತಿರುವ ಜಾತಿ ಸಂಕರದ ಕತೆಯನ್ನು ನೆನಪಿಗೆ ತರುತ್ತದೆ. ಅನುಲೋಮ ವಿವಾಹ ಪದ್ಧತಿಯಲ್ಲಿಲ್ಲದ ಜಾತಿ ಭೇದ ಮತ್ತು ಜಾತಿ ದ್ವೇಷವನ್ನು ವಿಲೋಮ ಪದ್ಧತಿಯಲ್ಲಿ ಅನುಸರಿಸಲಾಗಿದೆ.  ವಿಲೋಮ ಸಂಬಂಧಗಳು ಕೆಳಜಾತಿ ಅಥವಾ ಜಾತಿಯಾಚೆಗಿನ ಸಮುದಾಯಗಳಿಗೆ ಸೇರಿದ ಪುರುಷರ ಜೀವಕ್ಕೆ ಸಂಚಕಾರ ತಂದೊಡ್ಡುತ್ತದೆ. ಇದು ನಿಷಿದ್ಧ. ವಿಲೋಮ ವಿವಾಹ ವಿರುದ್ಧ ಕೆಳಜಾತಿ ಪುರುಷರನ್ನು ನಿರ್ಬಂಧಿಸುವ ಮತ್ತು ಅಂಥ ನಡೆಯ ವಿರುದ್ಧ ಎಚ್ಚರ ನೀಡುವ ಕ್ರಮವಿದಾಗಿದೆ. ಮುನಿಗಳು ಆರ್ಥಿಕ ಶೋಷಣೆಗೆ ಅವಕಾಶ ದೊರಕದ ವಿರುದ್ಧ ಮತ್ತು ದೇವ ಕನ್ನಿಕೆಯರು ವಿಲೋಮ ಸಂಬಂಧದ ವಿರುದ್ಧ ತೆರೆಮರೆಯ ರಾಜಕಾರಣದಲ್ಲಿ ತೊಡಗಿ ದ್ವೇಷ ಸಾಧಿಸುವರು. ಈ ಏಕ ಮಾತ್ರ ಅಂಶ ಎತ್ತಪ್ಪನ ತಲೆತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎತ್ತಪ್ಪನನ್ನು ಸೆರೆ ಹಿಡಿಯುವಲ್ಲಿ ಮತ್ತು ಅವನ ತಲೆ ತೆಗೆಯುವಲ್ಲಿ ಮತ್ತೊಂದು ಬುಡಕಟ್ಟು ಸಮುದಾಯವಾದ ಬೇಡರನ್ನು ಎತ್ತಿ ಕಟ್ಟಲಾಗುತ್ತದೆ. ಹಾಗೆಯೇ ವೈಷ್ಣವ ಪಂಥಕ್ಕೆ ಸೇರಿದ ದಾಸಪ್ಪ ಸಂಪ್ರದಾಯದ  ಜನರನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಯಾವುದೇ ಕೆಳ ಸಮುದಾಯವೊಂದು ತನ್ನ ಸಾಮಾಜಿಕ ವ್ಯವಸ್ಥೆಯ ಅಧೀನತೆಯನ್ನು ಧಿಕ್ಕರಿಸಿ ಶಕ್ತವಾಗುವ ಪ್ರಯತ್ನ ಮಾಡಿದ್ದಲ್ಲಿ ಆಗ ಅದನ್ನು ತನ್ನ ಹದ್ದುಬಸ್ತಿನಲ್ಲಿಟ್ಟುಕೊಳ್ಳಲು ಉಳಿದ ಕೆಳ ಸಮುದಾಯಗಳನ್ನು  ಛೂ ಬಿಟ್ಟು ಬೇಟೆಯಾಡುತ್ತದೆ. ಇದು ಮುನಿ ಸಮುದಾಯ ಸ್ವಹಿತ ರಕ್ಷಣೆ ಮಾಡಿಕೊಳ್ಳುವಲ್ಲಿ ಅನುಸರಿಸಿದ ರಾಜಕಾರಣದ ಸ್ವರೂಪವನ್ನೂ ಆರಂಭಿಕ ಹಂತದಿಂದಲೆ ಸ್ವ ಸಮುದಾಯ ಕೇಂದ್ರಿತ ರಾಜಕಾರಣ ರೂಢಿಸಿಕೊಂಡು ಬಂದ ಬಗೆಯನ್ನೂ  ಅರುಹುತ್ತದೆ.  
ಕಾಡುಗೊಲ್ಲ ಬುಡಕಟ್ಟಿನಲ್ಲಿ ರಾಸುಗಳ ಪಾಲನೆಯ ವೃತ್ತಿಯನ್ನು ಅರೆರಾಯ ಮತ್ತು ಬೋರೆರಾಯರ ಮಕ್ಕಳಾದ ಅಂಬೆರಾಯ ಮತ್ತು ತುಂಬೆರಾಯರು ಆರಂಭಿಸಿದರು. ಅವರು ಪಶುಪಾಲನೆಗಾಗಿಯೆ ಮದುವೆಯಾಗದೆ ತಮ್ಮ ಇಡೀ ಜೀವನವನ್ನು ಮೀಸಲಿಟ್ಟರು.  ಸಮುದಾಯದ ಆರ್ಥಿಕ ನೆಲೆಗಟ್ಟಾದ ಪಶುಪಾಲನೆಯನ್ನು ಕಾಪಾಡುವಲ್ಲಿ ಮತ್ತು ಬೆಳೆಸುವಲ್ಲಿ ಮಾದರಿಯಾಗಿದ್ದಾರೆ. ಈ ಕಾಯಕ ಮುಂದುವರೆಸುವ ಜನರಿಗಾಗಿ ಹುಡುಕಾಟ ನಡೆಸುವ ಮಾರಸಂದ್ರದ ಮಾರಕ್ಕ ಎತ್ತಪ್ಪನ ಹುಟ್ಟಿಗೆ ಪ್ರೇರಕಳಾಗುತ್ತಾಳೆ. ಕಾಡುಗೊಲ್ಲರಂಥ ಬುಡಕಟ್ಟು ಸಮುದಾಯದ ಮೇಲೆ ವೈದಿಕ ಶೈವಪಂಥ ದಟ್ಟ ಪ್ರಭಾವ ಬೀರಿದ್ದಕ್ಕೆ ಎತ್ತಪ್ಪನ ಜನನ ಪ್ರಸಂಗ ನಿದರ್ಶನವಾಗಿದೆ. ಶಿವ ಕಲ್ಪನೆ ಈ ಬುಡಕಟ್ಟಿನ ಸಾಧಕ ಶಕ್ತಿಯಲ್ಲದಿದ್ದರೂ ಮೂಲ ಶಕ್ತಿಯೆಂದು ಬಿಂಬಿಸುವ ಪ್ರಯತ್ನವಿದೆ. ಆದರೂ ಎತ್ತಪ್ಪ ಮತ್ತು ಜುಂಜಪ್ಪ ಸಂಪ್ರದಾಯಗಳೇ ಕಾಡುಗೊಲ್ಲ ಸಮುದಾಯದ ಜೀವನ ವಿಧಾನ ರೂಪಿಸಿರುವ ಶಕ್ತಿಮೂಲ ಕೇಂದ್ರಗಳಾಗಿವೆ. ಬಸವ ಶೈವ ಪಂಥ ಹಾಗೂ ರಾಸುಗಳ ಪ್ರತೀಕ. ಆದರೂ  ಈ ಸಮುದಾಯದ ಪಸುಪಾಲನೆಯ ಆಚರಣೆಗಳಲ್ಲಿ ಶೈವ ಆಚರಣೆಗಳು ಹಾಗೂ ನಂಬಿಕೆಗಳು ರೂಢವಾಗಿರುವುದು ಕಾಣುವುದಿಲ್ಲ. ಈ ಸಮುದಾಯ ಶಿಷ್ಟ ಪುರಾಣಗಳ ಪ್ರಭಾವಕ್ಕೆ ಒಳಗಾಗಿಯೂ ತನ್ನ ಸ್ವಂತಿಕೆ ಸಾಧಿಸಿರುವ ಪರಿಣಾಮವಿದು. ಹೀಗಿದ್ದರೂ ಮುನಿಗಳ ಮತ್ತು ದೇವ ಕನ್ನಿಕೆಯರ ಶಾಪ ಪ್ರಸಂಗಗಳು  ಎತ್ತಪ್ಪನ ಕಥಾ ಚೌಕಟ್ಟನ್ನು ನಿರ್ಧರಿಸಿವೆ. ಇದು ಶಿಷ್ಟ ಪುರಾಣಗಳ ಮಾದರಿಯನ್ನು ಅನುಸರಿಸಿದ ಪರಿಣಾಮವಾಗಿದೆ. ಬುಡಕಟ್ಟು ಸಮುದಾಯಗಳು ಶಿಷ್ಟ ಸಮಾಜವನ್ನು ಮೀರಬಾರದ ಎಚ್ಚರಿಕೆ ಮತ್ತು ಮೀರಲಾಗದ ಸೀಮಿತತೆಯನ್ನು ಹುಟ್ಟುಹಾಕಿದೆ.  ಶಿಷ್ಟರು ಹಾಕಿದ ಎಲ್ಲೆಯನ್ನು ಮೀರಿ ಸಮುದಾಯ ರಕ್ಷಣೆ ಮಾಡಹೊರಟ ಎತ್ತಪ್ಪ ಸರ್ವನಾಶವಾಗುವ ನಿರೂಪ ಬಹು ಸಮುದಾಯಗಳ ಒಕ್ಕೂಟವಾದ ಭಾರತೀಯ ಸಮಾಜದಲ್ಲಿ ಬುಡಕಟ್ಟುಗಳ ಸ್ಥಾನ-ಮಾನಗಳನ್ನು ನಿರ್ದೇಶಿಸಿದೆ. ಅಲ್ಲದೆ ಈ ನಿರೂಪದ ಸಂದೇಶ ಬಹು ಸಮುದಾಯಗಳ ಸಮಾಜದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಅನ್ವಯವಾಗುತ್ತದೆ.
ಗುಡ್ಡದ ಬೋರಿ ಪ್ರಸಂಗ ಎತ್ತಪ್ಪ ಕಥಾನಕದ ವಿಶೇಷ ಭಾಗವಾಗಿದೆ. ಶಿಷ್ಟ ಸಮಾಜ ಪುರುಷ ಪರ ಜೀವನ ಮೌಲ್ಯಗಳನ್ನು ಎತ್ತಿ ಹಿಡಿಯಲು ಅವನಿಗೆ ಬಹುಬಗೆಯಲ್ಲಿ ಹೆಣ್ಣಿನ ಅನುಭೋಗದ ಹಕ್ಕು ನೀಡಿದೆ. ಆದರೆ ಎತ್ತಪ್ಪನಿಗೆ ತನ್ನ ಹಿರಿಯರಂತೆ ಸಮುದಾಯದ ಆರ್ಥಿಕ ನೆಲೆಗಟ್ಟು ಕಾಪಾಡುವಿಕೆ ಮುಖ್ಯವಾಗಿದೆ, ಮತ್ತು ಹೆಣ್ಣಿನ ಸಂಪರ್ಕದಂಥ ವೈಯಕ್ತಿಕ ಹಿತಾಸಕ್ತಿಯಿಂದ ಅದು ಕೆಡುವುದೆಂದು ಬೆದರಿದ್ದಾನೆ. ಹಾಗಾಗಿ ಎತ್ತಪ್ಪ ತಾನು ಕಟ್ಟಿಕೊಂಡ ಹೆಣ್ಣಿನೊಂದಿಗೆ ಸಂಸಾರವನ್ನೂ ಮಾಡದೆ, ಆಕೆ ಅಟ್ಟಿದ ಅಡುಗೆಯನ್ನೂ ಉಣ್ಣದೆ ಪಶುಪಾಲನೆ ಕೇಂದ್ರಿತ ಕಟ್ಟುನಿಟ್ಟಿನ ಆಚರಣೆಯನ್ನು ತನ್ನ ಜೀವಮಾನವಿಡೀ ಪಾಲಿಸುತ್ತಾನೆ. ಇದು ಸಮುದಾಯದ ಹಿತದಲ್ಲೆ ತನ್ನ ವೈಯಕ್ತಿಕ ಜೀವನ ಸಾಧನೆ ಕಾಣುವ ಬಗೆಯಾಗಿದೆ. ಸಮುದಾಯದ ಆರ್ಥಿಕ ವ್ಯವಸ್ಥೆ ಯಾವ ಬಗೆಯಲ್ಲೂ ಅಡಚಣೆಗೆ ಒಳಗಾಗಬಾರದೆಂಬ ಹಿತ ಕಾಯುವ ದೃಷ್ಟಿ ಅವನಲ್ಲಿ ಸದಾ ಎಚ್ಚರವಾಗಿದ್ದು ಕಾರ್ಯನಿರ್ವಹಿಸಿದೆ. ಗುಡ್ಡದ ಬೋರಿ ಎತ್ತಪ್ಪನನ್ನು ಉತ್ಕಟವಾಗಿ ಮೋಹಿಸುವುದು ಮತ್ತು ಹೆಣ್ಣಿನ ಉತ್ಕಟ ಮೋಹಕ್ಕೆ ಮಣಿಯದೆ ಅದನ್ನು ಕಡೆಗಣಿಸಿ ಎತ್ತಪ್ಪ ಮೀರಿ ನಿಲ್ಲುವುದು - ಇದು ವೈಯಕ್ತಿಕ ಮತ್ತು ಸಮುದಾಯ ಪರವಾದ ಹಿತಾಸಕ್ತಿಗಳು ಮುಖಾಮುಖಿಯಾದ ಚಿತ್ರಣ. ದೇವ ಕನ್ನಿಕೆಯರೊಂದಿಗಿನ ಅನುಭವದ ಪ್ರಸಂಗ ವಿಲೋಮ ವಿವಾಹ ಪದ್ಧತಿಗಳ ಮೌಲ್ಯ ಕಲ್ಪನೆಗಳಲ್ಲಿರುವ ಸಂಕುಚಿತ ದೃಷ್ಟಿಕೋನವನ್ನು ಕೆಣಕುತ್ತದೆ.  ಅಲ್ಲದೆ ವೈಯಕ್ತಿಕ ಹಾಗೂ ಸಮುದಾಯ ಪರವಾದ ಹಿತಾಸಕ್ತಿಗಳು ಮೇಲುಗೈ ಪಡೆಯಲು ನಡೆಸಿದ  ತಿಕ್ಕಾಟದಲ್ಲಿ ಎತ್ತಪ್ಪ ಹೆಣ್ಣಿನ ವಿಚಾರದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ನಿರಾಕರಿಸಿ ಪಾಲಿಸಿದ ಅತ್ಯುತ್ಕಟ ಶೀಲ ಶುಚಿತ್ವವೆ ಆತನ ಸಮುದಾಯ ಹಿತಾಸಕ್ತಿಯನ್ನು ಸೋಲಿಸುವ ರಣತಂತ್ರವಾಗಿ ಬಳಕೆಯಾಗುತ್ತದೆ. ಗುಡ್ಡದ ಬೋರಿಯ ಮೋಹ ದ್ವೇಷವಾಗಿ ಪರಿಣಮಿಸಿ, ಸೇಡು ತೀರಿಸಿಕೊಳ್ಳುವ ಹಂತ ತಲುಪುತ್ತದೆ. ಎತ್ತಪ್ಪನ ಜೀವನ ಮೌಲ್ಯವೇ ಹೇಗೆ ಅದರ ದುರಂತಕ್ಕೆ ಮೂಲಕಾರಣವಾಗಿದೆ ಎಂಬುದನ್ನು ಈ ಕಥನ ಹೀಗೆ ಚಿತ್ರಿಸಿದೆ. ಈ ಮೂಲಕ ಕಾಡುಗೊಲ್ಲ ಸಮುದಾಯ ಶಿಷ್ಟರ ಕೈಯಲ್ಲಿ   ಅನುಭವಿಸಿದ ಅಪಮಾನ, ಸೋಲಿನ ಕಥಾನಕವಾಗಿ ಬದಲಾಗಿದೆ. 
'ಹೆತ್ತ ತುಪ್ಪದಲ್ಲಿ ಹುಟ್ಟಿದವನು' ಅಥವಾ 'ಎತ್ತಿನ ಅಪ್ಪ' ಎಂದು  ಎತ್ತಪ್ಪ ಪದದ ಅರ್ಥ ಹೊರಡುತ್ತದೆ. ಈ ವಿವರಣೆ ಕಾಡುಗೊಲ್ಲರಲ್ಲಿ ಎತ್ತಪ್ಪ ಕಥಾನಕದ ಮಹತ್ವ ಮತ್ತು ಅವರ ಆರ್ಥಿಕ ಜೀವನಕ್ಕೆ ಸಂಬಂಧಿಸಿರುವುದನ್ನು ಕಾಣಿಸುತ್ತದೆ. ಎತ್ತಪ್ಪ ಕಾಡುಗೊಲ್ಲ ಸಮುದಾಯದಲ್ಲಿ ಅಂಟು-ಮುಂಟು, ಮುಟ್ಟು-ಹೆರಿಗೆ ಕುರಿತು ನಿಷೇಧ ಭಾವ ರೂಢಿಸಿದವನು. ಹೆಂಗಸರು ಬಿಳಿ ಪತ್ತಲ ಮತ್ತು ಗೊಲ್ಲಕಡಗ ತೊಡುವ ನಿಯಮ ರೂಪಿಸಿದವನು.ಹಂದಿ ಕೋಳಿಗಳನ್ನು ಹಟ್ಟಿಯೊಳಗೆ ಸೇರಿಸದಿರುವ ನಿಯಮ, ಗೋಜನಿಗೆ ಕುಡಿಯುವ ಮತ್ತು ಮೀರಿದವರಿಗೆ ದಂಡ ವಿಧಿಸುವ ನಿಯಮ ವಿಧಿಸಿದವನು. ಆ ಮೂಲಕ ಸಮುದಾಯದ ಪಶುಪಾಲಕ ವೃತ್ತಿಯ ಮಹತ್ವವನ್ನು ಹೆಚ್ಚಿಸುವ ಮತ್ತು ಅದರ ರಕ್ಷಣೆಗೆ ಅಗತ್ಯವಾದ ಜೀವನ ಮೌಲ್ಯಗಳನ್ನು ರೂಢಿಗೆ ತಂದವನು ಎಂದೆ ಪ್ರತೀತಿ ಪಡೆದಿದ್ದಾನೆ. 
ಕಾಡು ಗೊಲ್ಲ ಸಮುದಾಯದ ಎತ್ತಪ್ಪನ ಕಥಾನಕ ಶಿಷ್ಟ ಪುರಾಣಗಳಂತೆ ಕಟ್ಟುಕತೆಗಳಾಗಿರದೆ ಚಾರಿತ್ರಿಕ ಕಥನವಾಗಿದೆ. ತನ್ನನ್ನು  ನಿರ್ನಾಮ ಮಾಡುವ ಉದ್ದೇಶದಿಂದ ವೈರಿಗಳು ನೀಡಿದ ಕರಾರುಬದ್ಧ ಪಂಥಾಹ್ವಾನವನ್ನು ಸ್ವೀಕರಿಸುವ ಎತ್ತಪ್ಪ ತನ್ನ ವೈರಿಗಳನ್ನು ಸೋಲಿಸಿದರೂ ಅವರ ಕರಾರುಗಳಿಂದಲೆ ಅವರನ್ನು ನಾಶಗೊಳಿಸದೆ  ಮಾನವ ಪ್ರೀತಿಯನ್ನು ತೋರುತ್ತಾನೆ. ಮಾನವ ಸಂಸ್ಕೃತಿ ಕುರಿತ ವ್ಯಾಖ್ಯಾನಕ್ಕೆ ಷರಾ ಬರೆದು ಬುಡಕಟ್ಟು ಸಂಸ್ಕೃತಿಗಳ ಮೇರು ಹಂತವನ್ನು ಸಾಧಿಸಿದ್ದಾನೆ. ಭಾರತದ ಬಹು ಸಮುದಾಯ ಒಕ್ಕೂಟದಲ್ಲಿ  ಕಾಡು ಗೊಲ್ಲ ಸಮುದಾಯಕ್ಕೆ ಸೀಮಿತಗೊಳ್ಳದ ಎತ್ತಪ್ಪನ ಕಥಾನಕ ಸಾಂಸ್ಕೃತಿಕ ಮಹತ್ವ ಪಡೆದ ಪಠ್ಯವಾಗಿದೆ. 

(ಇದು ಮೀರಸಾಬಿಹಳ್ಳಿ ಶಿವಣ್ಣ ಅವರು ಕನ್ನಡದಲ್ಲಿ ಬರೆದ ಮತ್ತು ಜಿ ಎಸ್ ಉಜ್ಜನಪ್ಪ ಅದರ ಇಂಗ್ಲಿಶಾನುವಾದ ಮಾಡಿದ ಎತ್ತಪ್ಪ ಕೃತಿ ಕುರಿತ ಬರವಣಿಗೆ. ಇದನ್ನು ಕಳೆದೆರಡು ವರ್ಷಗಳ ಹಿಂದೆ ಬರೆದಿದ್ದರೂ ಈಗ ಅಷ್ಟಿಷ್ಟು ತಿದ್ದುಪಡಿಯೊಂದಿಗೆ ಇಲ್ಲಿ ಮತ್ತೆ ನಿಮ್ಮ ಮುಂದಿಡುತ್ತಿದ್ದೇನೆ.)

ಸೋಮವಾರ, ಅಕ್ಟೋಬರ್ 31, 2011

ಬೆಲೆ

ಇಲ್ಲಿನ ಜಮೀನ್ದಾರಿ ಮನಸ್ಥಿತಿ ಮತ್ತು ಪ್ರತಿರೋಧ ಸ್ವಂತಿಕೆಯ ಪ್ರಶ್ನೆಯೊಂದಿಗೆ  ತಳಕು ಹಾಕಿಕೊಂಡಿವೆ.  ಉಪಮೇಯ ಮತ್ತು ಉಪಮಾನಗಳಾಗಿ ವಿರುದ್ಧಾರ್ಥಗಳನ್ನು ಹೊರಚೆಲ್ಲಿವೆ. ಇವು ಓದುಗನಲ್ಲಿ ಗೊಂದಲ/ಸಂಕೀರ್ಣತೆಯನ್ನೂ ಉಂಟುಮಾಡುತ್ತವೆ. ಇದು ಈ ಕಾಲದ ಗುಣವೇ? ಈ ಕಾರಣದಿಂದ ಇಲ್ಲಿ ಮತ್ತೆ ಮರುಮಂಡಿಸುತ್ತಿದ್ದೇನೆ.


#


ಸೂರ್ಯಪ್ಪ ತೆಂಗಿನ ಮರದ ಗರಿ ಅಂಚಿಗೆ ಇಳ್ದು
ಹೋಗಿದ್ದೆ ತಡ, ಒಳಗ್ಹೋಗಿ ಪಗಡದಸ್ತಾಗಿ
ಉಂಡುಬಿಟ್ಟು ಜಗಲಿ ಮ್ಯಾಲೆ ಕುಂತಿದ್ರು ಹಳ್ಳಿಮಂದಿ.
ಆ ವರ್ಷ ಮಳೆರಾಯ ಬಂದ್ಬುಟ್ಟು 'ಟಪ್ ಟಪ್'
ಊರಧಣಿ ಬರವಾಗ 'ಚರಪ್ ಚರಪ್' ಅಂತ ಜೋಡು ಅನ್ನೋ
ಅಂಗೆ, ಯಾವತ್ನಂಗೂ ಹಟ ಮಾಡ್ದೆ ರಾಯ
ಬಂದಿದ್ದು ಊರಧಣಿಗೆ ಅಲ್ಲ
ಒಂದೆರಡು ತುಕಡಾ ಪಾತಿ ಇದ್ದವ್ರಗೂ ಏನಂದಿಯಾ?
ಅದ್ನ ಹೇಳಕಾದಾತಾ?

ವತಾರನೆ ಊರಧಣಿ ಇದ್ದಕ್ಕಿದ್ದಂಗೆ ಹಳ್ಳಿ ರೈತರ್ ನ
ಕರ್ದು ನೋಡ್ರೆಪ ನಾನು ಕಬ್ಬು ಹಾಕ್ತೀನಿ
ನೀನು ಭತ್ತ ಹಾಕ್ಲಾ, ಅವ್ನು ರಾಗಿ ಹಾಕ್ಲಿ ಎಂದವ್ನೆ ಮತ್ತೆ
ಲೇ, ನೀನು ಉರುಳಿ ಹಾಕ್ಲಾ ಅವ್ನು ಶೇಂಗಾ ಹಾಕ್ಲಿ
ಮಳೆ ಎಲ್ಲದ್ದಕೂ ಹದವಾಗಾಗದೆ.
ನೀನು ಬದ್ನೆ ಹಾಕು ನೆಲ ಪಸಂದಾಗದೆ
ನಿನ್ನ ಹೊಲ ತೊಗರಿಗೆ ಲಾಯಕ್ಕಾಗದೆ ಕಣ್ಲಾ
ಅಂತ ಒಬ್ಬೊಬ್ಬನಿಗೆ ಒಂದೊಂದು ಬೆಳೆ
ಹಾಕಾಕೆ ಹೇಳುದ್ರೆ ಮೀರಕಾದಾತಾ !
ಎಲ್ರುನೂವೆ ಕತ್ತು ಬಗ್ಗಿಸಿದ್ದೋರು ಮಿಸುಕಾಡಲಿಲ್ಲ.
ಬೆಟ್ಟ ಅವ್ನಲ್ಲ, ಅದೇ ಚಿಕ್ಕಮಾರನ ಹೈದ
ಇಲ್ಲಪ್ಪೋ ನಾನೀಸಲ ಗದ್ದೇಲಿ ಕಬ್ಬು ಹಾಕ್ಬೇಕಂತೀವ್ನಿ
ನಾನು ಕಬ್ಬು ಹಾಕ್ತೀನಿ ಅಂತ ಅಂದೇಬುಟ್ಟ ಯಾರ
ಮಕಾನು ನೋಡ್ದಿರಾ ಆಟೊಂದ್ ಜನಗಳ್ ಎದುರ್ಗೆ
ಊರಧಣಿ ದುಡಕವ್ರಲ್ಲ ಅಂತ  ಎಲ್ರೂಗೂ ಗೊತ್ಹೇಳಿ
ಆದ್ರೂ ಅವ್ನು  ಅಂಗಂದಿದ್ದು ಯಾರೋ ಒಪ್ಕೋಳಿಲ್ಲ.

ನೀನ್ ಮೂರೆಕ್ರೆ ಗದ್ದೇಲಿ ಎಷ್ಟ್ ಬೆಳ್ದಿ?
ಕಾರ್ಕಾನೆಗೂ ಆಲೆಮನೆಗೂ ಆಗೋವಷ್ಟು ನನ್ನ ಗದ್ದೇಲಿ
ಬೆಳಿತದೆ. ಹೆಚ್ಚಗೆ ಬೆಳಂದಗಾಗದೆ ಧಾರ್ಣೆ ಏರ್ತದೆ.
ನೀನೂ ಹಾಕುದ್ರೆ ನಮ್ಗೆ ನಷ್ಟ. ಒಬ್ಬೊಬ್ರುನೂವೆ
ಒಂದೊಂದು ಹಾಕುದ್ರೆ ಬೆಳೆ ಬಂದಿದ್ದು ಸಾಕಾಗ್ದಿರಾ
ಧಾರ್ಣೆ ಏರ್ತದೆ. ಆಗ ನಮ್ಗೆ ಅಲ್ವೇನ್ಲಾ ಒಳ್ಳೇದು
ಅಂತ ಅಂದ್ರೂನೂವೆ ಕೇಳ್ದೆ ಬೆಳೆ 'ಹಾಕ್ತೀನಿ' ಅಂತ
ನೇಗ್ಲು ಹಿಡ್ದು ಉತ್ತೋಕೆ ಹೊಂಟೆಬಿಟ್ಟ.
ಆಮ್ಯಾಲೆ ಅವ್ನ ಬಾಲ ಹಿಡ್ಕೊಂಡು ಅವ್ರವ್ರಗಿಷ್ಟ
ಬಂದದ್ದು ಬಿತ್ತೋಕೆ, ಧಣಿ ಮಾತ್ಗೆ ಬೆಲೆ ಕೊಡ್ದೆ
ಉತ್ತೋಕೆ ಹೋದ್ರು ಉಳದವ್ರು.

ಎಲ್ರು ಹೋದಮೇಲೆ ಅಲ್ಲೆ ಕುಂತಿದ್ದ ಚಿಕ್ಕಹೈದ
ಮುಟ್ಟುದ್ರೆ ಮುನಿಸ್ಗೊಂಡು ಎಲೆ ಮುಚ್ಕೊಂಡಿದ್ದಂಗಿದ್ದ
ಅಪ್ನ ಮಕಾ ನೋಡಿ ಅಂತು-

ನೆನ್ನೆ ಮೇಟ್ರು ಇಸ್ಕೋಲಾಗೆ ನಮಗೊಂದು
ಪದ್ಯ ಮಾಡುದ್ರು. ಅದ್ರಾಗೆ ರಾಜನ ಮಾತು
ಕೇಳ್ದಿರಾ ಪದ್ಯ ಬರೆಯೋರು ನಮ್ಮಂಗೆ
ಇಷ್ಟ ಬಂದದ್ದು ಬರೆದ್ರು. ಆಮ್ಯಾಕೆ
ಎಲ್ರುದ್ದು ಒಂದೇ ಆಗೋಗಿ
ಪದ್ಯ ಬೇರೆ ಆಗಿತ್ತಂತೆ. ಆಮ್ಯಾಕೆ
ರಾಜ ನೀವ್ಯಾರು ನನ್ಹತ್ರ ಇರೋಕೆ
ಆಗಲ್ಲ. ಯಾಕಂದ್ರೆ ನೀವೆಲ್ಲ ಒಂದೇ ತರ
ನಿಮಗ್ಯಾರಿಗೂ ಬೆಲೆ ಇಲ್ಲ ಅದ್ನಂತೆ-
ಅಂತ ಮುಗ್ಸಿ ನಕ್ಕೊಂಡು ಆಡೋಕೆ
ಬಂದಿದ್ದ ಹುಡುಗ್ರು ಒಂದ್ಗೆ ಹೋದ.

ಇವ್ರಗೂ ಅಂಗೇ ಆಗೋದು ಕಣಾ
ಅಂತ ಮನಸ್ನಾಗೆ ಅಂದ್ಕೊಂಡ ಧಣಿ.