ಭಾನುವಾರ, ಮೇ 8, 2011

ಮುಖ ತೋರದವನು

ಭರವಸೆಯೆ ಬದುಕು, ಅದೇ ಸಮೃದ್ಧ ಜೀವನ ಎಂಬುದು ನಮ್ಮ ಪರಂಪರೆಯಿಂದ ಬಂದ ನಂಬಿಕೆ.  ಅಂಥ ನಂಬಿಕೆಯಿಂದ ಬದುಕನ್ನು ವ್ಯಕ್ತಿ ರೂಪದಲ್ಲಿ ಎದುರುಗೊಂಡ ಸ್ಥಿತಿಯಲ್ಲಿ  ವಾಸ್ತವ ಮೈಪಡೆದುಕೊಂಡ ನಾಟಕೀಯ ಬೆಳವಣಿಗೆ ಇಲ್ಲಿದೆ. 
ಬದುಕು ಭರವಸೆ ತುಂಬಿದ ಕೊಡವೂ ಅಲ್ಲ, ಬರಿ ಕೊಡವೂ ಅಲ್ಲ. ಅದು ನಿರೀಕ್ಷಿತ ಮಾನವೀಯ ಮುಖವಲ್ಲದ ಅನಿರೀಕ್ಷಿತವಾದ ಬದುಕಿನ ಮುಖ. . 
ಮೊದಲ ಸಂಕಲನ ಪ್ರಕಟವಾದಾಗ ಎಚ್ ಎಸ್ ವಿ ಈ ಕವಿತೆ ಕುರಿತು ಕಾಗದ ಬರೆದು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದರು.


 

ಮುಖ ತೋರದವನು  



ಆತ ಬಂದ ಸುದ್ದಿ ಹೇಗೋ ತಿಳಿಯಿತು
ಬಂದನೆಂದು ನನಗೂ ಅನಿಸಿತು
ಅನಿಸಿತು ಅಂದರೇನು ಅದರ ಅನುಭವವೂ
ಇನ್ನು ಭ್ರಮೆ ಎಂಥದ್ದು? ಹೇಳು
ಅವನನ್ನು ಸ್ವಾಗತಿಸುವ ಸಂಭ್ರಮದಲ್ಲಿ ನಾನು 
ಮುಳುಗಿ ಹೋಗಿದ್ದೆ. ಸ್ವಾಗತಿಸುವ 
ತಯಾರಿ, ಸಂಭ್ರಮಗಳ ಭರಾಟೆಯಲ್ಲಿ
ಆತ ಮಾಯವಾದದ್ದು ನನಗೆ ತಿಳಿಯಲೇ ಇಲ್ಲ
ಎಲ್ಲೆಲ್ಲೂ ಭಣ ಭಣ! ಯಾಕೆ ಹೀಗೆ? ಎನ್ನುವ
ಪ್ರಶ್ನೆಯಲ್ಲೇ ಎಲ್ಲವೂ ನನ್ನ ಕೈಗೆ ಸಿಕ್ಕಿ ಬಿಟ್ಟಿತು
ಆತ ಬಂದದ್ದು ತಿಳಿಯಲಿಲ್ಲ, ಹೋದ
ದಾರಿ ಯಾವುದಿರಬಹುದೆಂದು ಭಾವಿಸಲಿ?
ಆತ ಹಿಡಿದ ಜಾಡಿನ ಪಯಣ, ಅದರ ದೆಸೆ
ಎಲ್ಲಿ ತಿರುಗಿದೆ ಎಂದು ತಿಳಿದು ಹೇಗೆ ಹಿಂಬಾಲಿಸಲಿ?
ಎಂಬ ಪ್ರಶ್ನೆಯಲ್ಲೆ ನಾನು ತೆಪ್ಪಗೆ ಕುಳಿತುಬಿಟ್ಟೆ.

ಅವನ ಪರಿಚಯವಿರಲಿಲ್ಲ. ಮುಖದ ಗುರುತು
ಹೊರಟು ಬಂದ ಊರು, ಅದರೆ ಪುರಾವೆ ಏನೂ ತಿಳಿದಿರಲಿಲ್ಲ.
ಆದರೂ ಅವನು ಬಂದದ್ದು ಹಿರಿದೆಂದೆ ತಿಳಿದೆ
ಎಲ್ಲಿ ಆತ ಬಂದದ್ದೇ ಇಲ್ಲವಲ್ಲ! ಬಂದ
ನೆಂದು ಬರಿ ಪುಕಾರು ಆದದ್ದು ಯಾರಿಗೂ ತಿಳಿಯಲಿಲ್ಲ
ಅವನು ಬಂದಿದ್ದರೆ ಮಾತ್ರ ತುಂಬ ಚೆಂದವಿತ್ತು
ಮುಖಾ-ಮುಖಿ ಕುಳಿತು ಭಾವನಾಟ್ಯದ ಕತೆಯನ್ನ
ಕತೆ ಎಲ್ಲಿಂದ ಬಂತು, ಬಂದದ್ದು ಈಗ ಕಟ್ಟುಕತೆಯಷ್ಟೆ.
ಈಗಲೂ ನನಗೆ ಅವನ ಎಲ್ಲೋ ನೋಡಿದ ನೆನಪು
ನೆನಪು ಸ್ಪಷ್ಟ ಇಲ್ಲ. ಆತ ತಿರುಗಿ ಬರುವ
ನಂಬಿಕೆ ನನಗೆ ಎಳ್ಳಷ್ಟೂ ಇಲ್ಲ. ಮುಖ ತೋರದೆ
ಹಾಗೆ ಹೊರಟು ಹೋದದ್ದು ಮಾತ್ರ
ನನಗೇನೂ ಕೊಟ್ಟಂತಾಗಲಿಲ್ಲ.

'ಗಿಣ್ಣು' ಕವನ ಸಂಕಲನದಿಂದ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ