ಸೋಮವಾರ, ಅಕ್ಟೋಬರ್ 31, 2011

ಬೆಲೆ

ಇಲ್ಲಿನ ಜಮೀನ್ದಾರಿ ಮನಸ್ಥಿತಿ ಮತ್ತು ಪ್ರತಿರೋಧ ಸ್ವಂತಿಕೆಯ ಪ್ರಶ್ನೆಯೊಂದಿಗೆ  ತಳಕು ಹಾಕಿಕೊಂಡಿವೆ.  ಉಪಮೇಯ ಮತ್ತು ಉಪಮಾನಗಳಾಗಿ ವಿರುದ್ಧಾರ್ಥಗಳನ್ನು ಹೊರಚೆಲ್ಲಿವೆ. ಇವು ಓದುಗನಲ್ಲಿ ಗೊಂದಲ/ಸಂಕೀರ್ಣತೆಯನ್ನೂ ಉಂಟುಮಾಡುತ್ತವೆ. ಇದು ಈ ಕಾಲದ ಗುಣವೇ? ಈ ಕಾರಣದಿಂದ ಇಲ್ಲಿ ಮತ್ತೆ ಮರುಮಂಡಿಸುತ್ತಿದ್ದೇನೆ.


#


ಸೂರ್ಯಪ್ಪ ತೆಂಗಿನ ಮರದ ಗರಿ ಅಂಚಿಗೆ ಇಳ್ದು
ಹೋಗಿದ್ದೆ ತಡ, ಒಳಗ್ಹೋಗಿ ಪಗಡದಸ್ತಾಗಿ
ಉಂಡುಬಿಟ್ಟು ಜಗಲಿ ಮ್ಯಾಲೆ ಕುಂತಿದ್ರು ಹಳ್ಳಿಮಂದಿ.
ಆ ವರ್ಷ ಮಳೆರಾಯ ಬಂದ್ಬುಟ್ಟು 'ಟಪ್ ಟಪ್'
ಊರಧಣಿ ಬರವಾಗ 'ಚರಪ್ ಚರಪ್' ಅಂತ ಜೋಡು ಅನ್ನೋ
ಅಂಗೆ, ಯಾವತ್ನಂಗೂ ಹಟ ಮಾಡ್ದೆ ರಾಯ
ಬಂದಿದ್ದು ಊರಧಣಿಗೆ ಅಲ್ಲ
ಒಂದೆರಡು ತುಕಡಾ ಪಾತಿ ಇದ್ದವ್ರಗೂ ಏನಂದಿಯಾ?
ಅದ್ನ ಹೇಳಕಾದಾತಾ?

ವತಾರನೆ ಊರಧಣಿ ಇದ್ದಕ್ಕಿದ್ದಂಗೆ ಹಳ್ಳಿ ರೈತರ್ ನ
ಕರ್ದು ನೋಡ್ರೆಪ ನಾನು ಕಬ್ಬು ಹಾಕ್ತೀನಿ
ನೀನು ಭತ್ತ ಹಾಕ್ಲಾ, ಅವ್ನು ರಾಗಿ ಹಾಕ್ಲಿ ಎಂದವ್ನೆ ಮತ್ತೆ
ಲೇ, ನೀನು ಉರುಳಿ ಹಾಕ್ಲಾ ಅವ್ನು ಶೇಂಗಾ ಹಾಕ್ಲಿ
ಮಳೆ ಎಲ್ಲದ್ದಕೂ ಹದವಾಗಾಗದೆ.
ನೀನು ಬದ್ನೆ ಹಾಕು ನೆಲ ಪಸಂದಾಗದೆ
ನಿನ್ನ ಹೊಲ ತೊಗರಿಗೆ ಲಾಯಕ್ಕಾಗದೆ ಕಣ್ಲಾ
ಅಂತ ಒಬ್ಬೊಬ್ಬನಿಗೆ ಒಂದೊಂದು ಬೆಳೆ
ಹಾಕಾಕೆ ಹೇಳುದ್ರೆ ಮೀರಕಾದಾತಾ !
ಎಲ್ರುನೂವೆ ಕತ್ತು ಬಗ್ಗಿಸಿದ್ದೋರು ಮಿಸುಕಾಡಲಿಲ್ಲ.
ಬೆಟ್ಟ ಅವ್ನಲ್ಲ, ಅದೇ ಚಿಕ್ಕಮಾರನ ಹೈದ
ಇಲ್ಲಪ್ಪೋ ನಾನೀಸಲ ಗದ್ದೇಲಿ ಕಬ್ಬು ಹಾಕ್ಬೇಕಂತೀವ್ನಿ
ನಾನು ಕಬ್ಬು ಹಾಕ್ತೀನಿ ಅಂತ ಅಂದೇಬುಟ್ಟ ಯಾರ
ಮಕಾನು ನೋಡ್ದಿರಾ ಆಟೊಂದ್ ಜನಗಳ್ ಎದುರ್ಗೆ
ಊರಧಣಿ ದುಡಕವ್ರಲ್ಲ ಅಂತ  ಎಲ್ರೂಗೂ ಗೊತ್ಹೇಳಿ
ಆದ್ರೂ ಅವ್ನು  ಅಂಗಂದಿದ್ದು ಯಾರೋ ಒಪ್ಕೋಳಿಲ್ಲ.

ನೀನ್ ಮೂರೆಕ್ರೆ ಗದ್ದೇಲಿ ಎಷ್ಟ್ ಬೆಳ್ದಿ?
ಕಾರ್ಕಾನೆಗೂ ಆಲೆಮನೆಗೂ ಆಗೋವಷ್ಟು ನನ್ನ ಗದ್ದೇಲಿ
ಬೆಳಿತದೆ. ಹೆಚ್ಚಗೆ ಬೆಳಂದಗಾಗದೆ ಧಾರ್ಣೆ ಏರ್ತದೆ.
ನೀನೂ ಹಾಕುದ್ರೆ ನಮ್ಗೆ ನಷ್ಟ. ಒಬ್ಬೊಬ್ರುನೂವೆ
ಒಂದೊಂದು ಹಾಕುದ್ರೆ ಬೆಳೆ ಬಂದಿದ್ದು ಸಾಕಾಗ್ದಿರಾ
ಧಾರ್ಣೆ ಏರ್ತದೆ. ಆಗ ನಮ್ಗೆ ಅಲ್ವೇನ್ಲಾ ಒಳ್ಳೇದು
ಅಂತ ಅಂದ್ರೂನೂವೆ ಕೇಳ್ದೆ ಬೆಳೆ 'ಹಾಕ್ತೀನಿ' ಅಂತ
ನೇಗ್ಲು ಹಿಡ್ದು ಉತ್ತೋಕೆ ಹೊಂಟೆಬಿಟ್ಟ.
ಆಮ್ಯಾಲೆ ಅವ್ನ ಬಾಲ ಹಿಡ್ಕೊಂಡು ಅವ್ರವ್ರಗಿಷ್ಟ
ಬಂದದ್ದು ಬಿತ್ತೋಕೆ, ಧಣಿ ಮಾತ್ಗೆ ಬೆಲೆ ಕೊಡ್ದೆ
ಉತ್ತೋಕೆ ಹೋದ್ರು ಉಳದವ್ರು.

ಎಲ್ರು ಹೋದಮೇಲೆ ಅಲ್ಲೆ ಕುಂತಿದ್ದ ಚಿಕ್ಕಹೈದ
ಮುಟ್ಟುದ್ರೆ ಮುನಿಸ್ಗೊಂಡು ಎಲೆ ಮುಚ್ಕೊಂಡಿದ್ದಂಗಿದ್ದ
ಅಪ್ನ ಮಕಾ ನೋಡಿ ಅಂತು-

ನೆನ್ನೆ ಮೇಟ್ರು ಇಸ್ಕೋಲಾಗೆ ನಮಗೊಂದು
ಪದ್ಯ ಮಾಡುದ್ರು. ಅದ್ರಾಗೆ ರಾಜನ ಮಾತು
ಕೇಳ್ದಿರಾ ಪದ್ಯ ಬರೆಯೋರು ನಮ್ಮಂಗೆ
ಇಷ್ಟ ಬಂದದ್ದು ಬರೆದ್ರು. ಆಮ್ಯಾಕೆ
ಎಲ್ರುದ್ದು ಒಂದೇ ಆಗೋಗಿ
ಪದ್ಯ ಬೇರೆ ಆಗಿತ್ತಂತೆ. ಆಮ್ಯಾಕೆ
ರಾಜ ನೀವ್ಯಾರು ನನ್ಹತ್ರ ಇರೋಕೆ
ಆಗಲ್ಲ. ಯಾಕಂದ್ರೆ ನೀವೆಲ್ಲ ಒಂದೇ ತರ
ನಿಮಗ್ಯಾರಿಗೂ ಬೆಲೆ ಇಲ್ಲ ಅದ್ನಂತೆ-
ಅಂತ ಮುಗ್ಸಿ ನಕ್ಕೊಂಡು ಆಡೋಕೆ
ಬಂದಿದ್ದ ಹುಡುಗ್ರು ಒಂದ್ಗೆ ಹೋದ.

ಇವ್ರಗೂ ಅಂಗೇ ಆಗೋದು ಕಣಾ
ಅಂತ ಮನಸ್ನಾಗೆ ಅಂದ್ಕೊಂಡ ಧಣಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ