ಟಿಪ್ಪಣಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಟಿಪ್ಪಣಿ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶನಿವಾರ, ಜೂನ್ 11, 2011

ಸೃಜನವೇದಿಯಲ್ಲಿ ಕಾವ್ಯ ಕುರಿತ ನನ್ನ ಟಿಪ್ಪಣಿ

ಪಾಶ್ಚಾತ್ಯ ದೇಶವೊಂದರಲ್ಲಿ ಇಂಗ್ಲಿಶ್ ಸಾಹಿತ್ಯವನ್ನು ಹೇಳಿಕೊಡುತ್ತಿದ್ದ ಹೇಮಂತ ಕುಲಕರ್ಣಿಯವರು ತಮ್ಮ ಪ್ರಾಧ್ಯಾಪಕ ಹುದ್ದೆಯಲ್ಲಿ ನಿವೃತ್ತರಾದ ನಂತರ1984ರ ಆಜೂಬಾಜೂ ಭಾರತಕ್ಕೆ ಹಿಂದಿರುಗಿದ್ದಿರಬೇಕು. ಆ ನಂತರ ಮುಂಬೈನಿಂದ ಅವರು ಕಾವ್ಯಕ್ಕೆ ಮೀಸಲಾದ ಸಾಹಿತ್ಯ ಪತ್ರಿಕೆಯನ್ನು `ಸೃಜನವೇದಿ' ಎಂಬ ಹೆಸರಿನಲ್ಲಿ ಸಂಪಾದಿಸಿ ಪ್ರಕಟಿಸತೊಡಗಿದರು. ಅದರಲ್ಲಿ ಮುಖ್ಯವಾಗಿ ಹೇಮಂತ ಕುಲಕರ್ಣಿಯವರು ಇಂಗ್ಲಿಶ್ ಸಾಹಿತ್ಯದಲ್ಲಿ ವಿಶೇಷವಾಗಿ ಪಾಶ್ಚಾತ್ಯ ದೇಶಗಳಲ್ಲಿ ನಡೆದ ವಿವಿಧ ಸಾಹಿತ್ಯ(ಕಾವ್ಯಕ್ಷೇತ್ರದಲ್ಲಾದ) ಚಳವಳಿಗಳ ಸಾಂಸ್ಕೃತಿಕ ಪರಿಸರ, ಆಶಯ, ಗುಣ ಸ್ವರೂಪ, ಮತ್ತು ಸಾಧನೆಗಳನ್ನು ಪರಿಚಯಿಸಿಕೊಟ್ಟಿದ್ದಾರೆ. ಇಂಗ್ಲಿಶ್ ಹಿನ್ನೆಲೆ ಇಲ್ಲದ ಕನ್ನಡ ಆಸಕ್ತ ಓದುಗರಿಗೆ ಇವು ಉಪಯುಕ್ತ ಮಾಹಿತಿ ಒದಗಿಸಿವೆ. 1986ರ ಸಂಚಿಕೆಯೊಂದರಲ್ಲಿ ಅವರು ಇತರ ಚಳವಳಿಗಳೊಂದಿಗೆ `ದ್ಯಾದಾಯಿಜಮಂ' ಕುರಿತು ವಿವರ ನೀಡಿದ್ದರು. ಅದಕ್ಕೆ ನಾನು ಕೂಡಲೇ ಪ್ರತಿಕ್ರಿಯಿಸಿ ಟಿಪ್ಪಣಿ ಸಿದ್ಧ ಪಡಿಸಿ ಸಂಪಾದಕರಿಗೆ ರವಾನಿಸಿದ್ದೆ. ಅದು ಸೃಜನವೇದಿಯ 1986ರ ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾಗಿ ನನಗೆ ಅಚ್ಚರಿಯನ್ನೂ ಉಂಟುಮಾಡಿತ್ತು. ಕಾವ್ಯ ಕುರಿತ ಅಂದಿನ ನನ್ನ ಚಿಂತನಾ ಲಹರಿಯನ್ನು ಅದು ದಾಖಲಿಸಿದ್ದು, ಅದನ್ನು ಯಥಾವತ್ತಾಗಿ ನಿಮ್ಮ ಮುಂದೆ ಇರಿಸುತ್ತಿದ್ದೇನೆ. 
#
"ಶ್ರೀಧರ ಪಿಸ್ಸೆ
ಕಾವ್ಯ ಮತ್ತು ಕತ್ತಿ- ಒಂದು ಅಭಿಪ್ರಾಯ
ಮಾನ್ಯರೇ,
`ನವ್ಯತೆಯಲ್ಲಿ ಪೂರ್ವ-ಪಶ್ಚಿಮ ಸಮನ್ವಯ' ಎಂಬ ತಮ್ಮ ಲೇಖನದಲ್ಲಿ ದ್ಯಾದಾಯಿಸಮ್ ನ ಕಾವ್ಯ ಧೋರಣೆಯನ್ನು ಕುರಿತು "ಕಾವ್ಯವೆಂದರೆ ತೀಕ್ಷ್ಣವಾದ ಚೂರಿ, ಪಿಸ್ತೂಲು, ಒಂದು ಬಾಂಬು.' ಎಲ್ಲವನ್ನೂ ಉಧ್ವಸ್ತಗೊಳಿಸಲು ಹೊರಟ ಶಕ್ತಿ. ಅದರಂತೆಯೆ ಸಮಾಜವು ಕವಿಯನ್ನು ಕಟ್ಟಿ ಹಾಕಿದ ಸೆರೆಮನೆ. ಈ ಸೆರೆಮನೆಯ ಗೋಡೆಗಳನ್ನೆಲ್ಲ ಕೆಡವಬೇಕಾದರೆ ಕಾವ್ಯದ ಬಾಂಬು ಸ್ಫೋಟವಾಗಬೇಕು. ಆಗ ಮಾತ್ರ ಕವಿಗೆ ಬಿಡುಗಡೆಯಾಗುತ್ತದೆ" ಎಂದು ವಿವರಿಸಿದ್ದೀರಿ.


ನಿಮ್ಮ ವಿವರಣೆ ನನಗೆ ಸಮ್ಮತವೆನಿಸಲಿಲ್ಲ. ಕಾರಣ ಯಾವ ಕಲಾಕೃತಿಯ ಮೂಲಭೂತ ಉದ್ದೇಶವೂ ಧ್ವಂಸಗೊಳಿಸುವಂಥದ್ದಲ್ಲ, ನಾಶಗೊಳಿಸುವಂಥದ್ದಲ್ಲ. ಆದರೂ ಅದು `ಒಂದು ತೀಕ್ಷ್ಣವಾದ ಚೂರಿ, ಒಂದು ಪಿಸ್ತೂಲು, ಒಂದು ಬಾಂಬು' ಆಗಿರುತ್ತದೆ ಮತ್ತು ಆಗಿರಲೇಬೇಕಾಗುತ್ತದೆ.  ಮಾನವತೆ ಮತ್ತು ಮಾನವತೆಯ ಉನ್ನತಿಗಾಗಿ ನಡೆಯುವ ನಿರಂತರ ಹೋರಾಟದಲ್ಲಿ ಒಬ್ಬ ಶ್ರೇಷ್ಟ ಕಲಾವಿದ ಅಸಾಮಾನ್ಯ, ಅಗ್ರಗಣ್ಯ ಮಾನವೀಯ ಹೋರಾಟಗಾರನಾಗಿರುತ್ತಾನೆ. ಅಸಾಮಾನ್ಯ ಹೋರಾಟತನ ಮತ್ತು ಅಭವ್ಯಕ್ತಿಯ ತೀವ್ರ ತುಡಿತ ಒಂದಕ್ಕೊಂದು ಗಂಟು ಬಿದ್ದಿರುವುದರಿಂದ ಆತನ ಮಾನವೀಯ ಪರವಾದ ಪ್ರಾಮಾಣಿಕ ಹೋರಾಟವಂತಿಕೆ ಸತತವಾಗಿ ಪರೀಕ್ಷೆಗೆ ಒಳಗಾಗುತ್ತಿರುತ್ತದೆ. ಮತ್ತು ಇದು ಸಹಜ, ಅನಿವಾರ್ಯ ಕೂಡ ಆಗಿರುತ್ತದೆ. ಯಾರು ಹೋರಾಟವಂತಿಕೆಯನ್ನು ಅಪ್ರತಿಮವಾಗಿ ಜೀವಂತ ಉಳಿಸಿಕೊಳ್ಳಲಾರರೋ ಅವರ ಕೃತಿಗಳೂ ಕಲಾವಂತಿಕೆಯಿಂದ ದೂರ ಸಾಗುತ್ತವೆ. ಪ್ರತಿಯೊಬ್ಬ ಶ್ರೇಷ್ಟ ಕಲಾವಿದನಿಗೂ ತನ್ನ ಕಲಾ ಮಾಧ್ಯಮವೇ `ಒಂದು ತೀಕ್ಷ್ಣವಾದ ಚೂರಿ ಒಂದು ಪಿಸ್ತೂಲು, ಒಂದು ಬಾಂಬು' ಅಂದರೆ ಆಯುಧ, ಅಂತಿಮವಾದ ಆಯುಧ. ತನ್ನ ಸುತ್ತಲ ತನ್ನ ಜನರಲ್ಲೆ ಮನೆ ಮಾಡಿರುವ ಮಾನವೀಯ ಗುಣ, ಪ್ರವೃತ್ತಿ, ತುಡಿತ, ಮಿಡಿತಗಳನ್ನು ನೆಲೆಯೂರಿಸಲು ಆ ಕಲಾವಿದ  ಸತತವಾಗಿ ತನ್ನ ಆಯುಧವನ್ನು ಹರಿತವನ್ನಾಗಿ, ಹೊಳಪನ್ನಾಗಿ, ಕಾಂತಿಯುಕ್ತವಾಗಿ ಮಾಡಬೇಕು ಮತ್ತು ಮಾಡುತ್ತಿರುತ್ತಾನೆ. ಯಾವ ಕಲಾವಿದ ತನ್ನ ಆಯುಧವನ್ನು
ಎಷ್ಟರಮಟ್ಟಿಗೆ ಹರಿತವನ್ನಾಗಿ ಹೊಳಪನ್ನಾಗಿ ಕಾಂತಿಯುಕ್ತವಾಗಿ ಮಾಡಿ ಎಷ್ಟರಮಟ್ಟಿಗೆ ಶಕ್ತಿಯುತವಾಗಿ ಸಮರ್ಥವಾಗಿ ಪ್ರಭಾವಯುತವಾಗಿ ಪರಿಣಾಮ ಬೀರುವುದರಲ್ಲಿ ಯಶ ಸಾಧಿಸುತ್ತಾನೋ ಅಷ್ಟರಮಟ್ಟಿಗೆ ಕಲಾಂತಿಕೆಯಲ್ಲಿ ಶ್ರೇಷ್ಟತೆಯನ್ನು ಪಡೆದಿರಲು ಸಮರ್ಥನಾಗಿರುತ್ತಾನೆ.


ಯಾವುದೇ ಕಲಾ ಪ್ರಕಾರದ ಅಭಿವ್ಯಕ್ತಿಯ ಮೂಲಭೂತ ತುಡಿತವೇ ಪ್ರತಿಭಟನೆಯ ಪ್ರವೃತ್ತಿಯುಳ್ಳದ್ದು, ಅಂದರೆ ಆವಿಷ್ಕಾರಗೊಂಡ ಸತ್ಯದ ಹೊಸ ರೂಪಗಳನ್ನು ಹೇಳುವಂಥದ್ದು, ಇಲ್ಲವೆ  ಬದಲಾದ ಯುಗಧರ್ಮಕ್ಕನುಗುಣವಾದ ಹೊಸ ಅನುಭವದ ಹಿನ್ನೆಲೆಯಲ್ಲಿ ಸತ್ಯದ ಹೊಸ ಮುಖಗಳನ್ನು ಎತ್ತಿ ಹಿಡಿಯುವಂಥದ್ದು. ಇಲ್ಲಿ ಪ್ರತಿಭಟನೆ ಧ್ವಂಸಗೊಳಿಸುವ ರೂಪ ಪಡೆದದ್ದಲ್ಲ, ಮಾನವತೆಯ ರಕ್ಷಣೆಯ ತಂತ್ರವನ್ನು ಹೊಂದಿರುವಂಥದ್ದು. ಕೆಲವು ಸಾರಿ ಮಾನವತೆಯ ಸಕಾರಾತ್ಮಕ ಮುಖಗಳನ್ನು ನಿಲುವುಗಳನ್ನು ಪ್ರತಿಪಾದಕಾತ್ಮಕವಾಗಿ ಅಭಿವ್ಯಕ್ತಿಸುವಾಗ ಕಲಾ ಮಾಧ್ಯಮ ಖಡ್ಗವಾಗದಿರಬಹುದು, ಆದರೆ ಅದರ ಹೊಳಪು, ಝಳಪು, ಕಾಂತಿ, ಚೈತನ್ಯದ ಜೀವಂತಿಕೆಯನ್ನು ಮೈ ಪಡೆದು ಬೆಳಗದೆ ಇರದು.


ಕಾವ್ಯ- ಅದು ಯಾವ ಮಾರ್ಗದ ಕಾವ್ಯವೇ ಆಗಿರಲಿ ತನ್ನ ಮೂಲಭೂತ ಸತ್ಯಗಳಲ್ಲಿ ಒಂದಾದ ಮಾನವೀಯ ಪರವಾದ ಧೋರಣೆಯನ್ನು ಪಡೆದಿರುತ್ತದೆ. ಆದ್ದರಿಂದ ಹೋರಾಟವಂತಿಕೆಯ ಗುಣ ದ್ಯಾದಾಯಿಸಂ ಕಾವ್ಯದ ಧೋರಣೆಯಾಗಿರುವಂತೆ ಮಾರ್ಗಾಮಾರ್ಗಗಳ ಯಾವ ಭೇದವೂ ಇಲ್ಲದೆ ಅಥವಾ ಅದನ್ನು ಮೀರಿ ಎಲ್ಲ ನಿಜ ಕಾವ್ಯದ ಧೋರಣೆಯೂ ಕೂಡ ಹೌದು ಅಲ್ಲವೆ?


ಟಿಪ್ಪಣಿ-ಸಂಪಾದಕರಿಂದ
ನನ್ನ ಹಿಂದಿನ ಸಂಚಿಕೆಯಲ್ಲಿ ಬಂದ ಲೇಖನದಲ್ಲಿ "ದ್ಯಾದಾಯಿಜಮ್" ಆಂದೋಲನದ ವಿಚಾರಗಳನ್ನಷ್ಟೇ ವಿವರಿಸಲಾಗಿದೆ. ಕೊಲ್ಲದ ಹೊರತು ಕಟ್ಟುವುದು ಸಾಧ್ಯವಿಲ್ಲ, ಕಟ್ಟುವುದು ಮುಖ್ಯ ಆದರ್ಶ. ಅದಕ್ಕಾಗಿ ಕೊಳೆತ, ದುಷ್ಟ ಶಕ್ತಿಗಳನ್ನೆಲ್ಲ ಕೊಲ್ಲುವುದು ಅವಶ್ಯಕ.              
                                         - ಹೇಮಂತ"
#
ಹೇಮಂತ ಕುಲಕರ್ಣಿ ತಮ್ಮ ಪತ್ರಿಕೆಯಲ್ಲಿ ದ್ಯಾದಾಯಿಜಮ್ ಕುರಿತು ಬರೆಯುವ ಹೊತ್ತಿಗೆ ಕನ್ನಡದಲ್ಲಿ ದಲಿತ-ಬಂಡಾಯ ಚಳವಳಿ ತುತ್ತತುದಿ ತಲುಪಿಯಾಗಿತ್ತು. ಎಡಪಂಥೀಯ ಚಿಂತನೆಯನ್ನು ಅಪ್ಪಿಕೊಂಡಿದ್ದ ಪರಿಣಾಮವಾಗಿ `ಖಡ್ಗವಾಗಲಿ ಕಾವ್ಯ' ಬಂಡಾಯದ ಘೋಷವಾಕ್ಯವೂ ಆಗಿತ್ತು. ಬಲಪಂಥೀಯ ಚಿಂತನಾ ಕ್ರಮಗಳು ಬಹು ಸಮುದಾಯಗಳ ಸಮಾಜದಲ್ಲಿ ಪರಂಪರಾಗತವಾಗಿ ಮೇಲುಗೈ ಪಡೆದು ಯಜಮಾನ ಸಂಸ್ಕೃತಿಯಾಗಿತ್ತು. ಬೇರುಬಿಟ್ಟಿದ್ದ ಬಲಪಂಥೀಯ ಚಿಂತನಾ ಕ್ರಮಗಳನ್ನು ಪ್ರಶ್ನೆ ಮಾಡಲು ದಲಿತ-ಬಂಡಾಯ ಚಳವಳಿಗೆ ಎಡಪಂಥೀಯ ಚಿಂತನಾಕ್ರಮಗಳು ಬಲ ನೀಡಿದ್ದವು. ಬಲಪಂಥೀಯ ಚಿಂತನಾ ಕ್ರಮಗಳು ಈ ನೆಲದಲ್ಲಿ ಚರಿತ್ರೆಯ ಭಾಗವಾಗಿ ಬೆಳೆದು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗಿ ಸಾಮಾಜಿಕ ರೂಢಿ-ಆಚರಣೆಗಳಾಗಿ ಭದ್ರವಾಗಿ ಈ ನಾಡಿನ ಜೀವನದ ಭಾಗವಾಗಿತ್ತು. ಅದನ್ನು ಪ್ರತಿರೋಧಿಸುವ ಅಂಶವನ್ನು ಕಲಿಸಿಕೊಟ್ಟ ಎಡಪಂಥೀಯ ಚಿಂತನೆಗಳು ಯೂರೋಪಿನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಮೈಪಡೆದುದಾಗಿತ್ತು.   ಬಂಡವಾಳಶಾಹಿ ಮತ್ತು ಕೂಲಿಕಾರ್ಮಿಕ ವರ್ಗಗಳು ಹುಟ್ಟಿಕೊಂಡ ಪಾಶ್ಚಿಮಾತ್ಯ ಸಮಾಜದಲ್ಲಿನ ಒಂದೇ ಭಾಷೆ, ಒಂದೇ ಸಮುದಾಯ, ಒಂದೇ ಜನಾಂಗ, ಒಂದೇ ರಾಷ್ಟ್ರ ಕಲ್ಪನೆಯಡಿ ಆರ್ಥಿಕ ಅಸಮಾನತೆಯನ್ನು ನಿವಾರಿಸುವ ಸಮಾಜವಾದದ  ಭಾಗವಾಗಿ ಎಡಪಂಥ ಕಲ್ಪನೆ ಇತ್ತು. ಆದರೆ ಭಾರತದ ಬಲಪಂಥೀಯ ಚಿಂತನಾಕ್ರಮ ಇಲ್ಲಿನ ವಿಶಾಲ ಭೂ ಪ್ರದೇಶದಲ್ಲಿ ಮೂಲನೆಲೆ ಹೊಂದಿರುವ ಬಹುಸಮುದಾಯಗಳ ಮೇಲೆ ನಿಯಂತ್ರಣ ಸಾಧಿಸುವ  ಯಜಮಾನ ಸಂಸ್ಕೃತಿಯ ರಾಜಕಾರಣದ ಭಾಗವಾಗಿದೆ. ಆದರೂ ಇದೇ ಕಾರಣಕ್ಕಾಗಿ ಈ ಬಹುಸಮುದಾಯಗಳು ಯೂರೋಪಿನ ಸಮಾಜದ ಹಾಗೆ ಎರಡು ಭಾಗಗಳಾಗಿ ಸರಳವಾಗಿ ಒಡೆದುಹೋಗಿಲ್ಲ. ಅದರ ಬದಲು ಶ್ರೇಷ್ಟ-ಕನಿಷ್ಟ ಕಲ್ಪನೆ ಆಧಾರದ ಮೇಲೆ  ಇಡೀ ಸಮಾಜ ಬಹುಶ್ರೇಣಿಕೃತ ಸಮಾಜವಾಗಿದೆ. ಅತಿ ಮೇಲಿರುವ ಸಮುದಾಯ ಮತ್ತು ಅತಿ ತಳಮಟ್ಟದಲ್ಲಿರುವ ಸಮುದಾಯಗಳ ನಡುವೆ ಮೇಲು-ಕೀಳು ಮೌಲ್ಯ ಒಪ್ಪಿತ ಹಲವು ಸಾಮಾಜಿಕ ಶ್ರೇಣಿಕರಣ ಈಗಲೂ ಇದೆ. ಈ ಸಮುದಾಯಗಳು ಭಾರತೀಯ ಸಮಾಜದ ಎಲ್ಲ ಕಾಲದಲ್ಲೂ ವಾಸ್ತವವೆ ಆಗಿದ್ದು ಮಧ್ಯಮ ನಿಲುವು ತಳೆದಿವೆ. ಇವು ಅತಿಯಾದ ಬಲಪಂಥ ಮತ್ತು ಅತಿಯಾದ ಎಡಪಂಥ ಒಪ್ಪದ ಮಧ್ಯಮ ವಾದ ಬಿಂಬಿಸುವ ಸಮುದಾಯಗಳಿವೆ. 
ಭಾರತದ ಬಲಪಂಥೀಯ ಮತ್ತು ಪಾಶ್ಚಾತ್ಯ ಎಡಪಂಥೀಯ ಚಿಂತನಾ ಕ್ರಮಗಳ ಹುಟ್ಟು ಮತ್ತು ಬೆಳವಣಿಗೆಗಳಲ್ಲಿ ಯಾವುದೇ ಸಾಮ್ಯತೆ ಇಲ್ಲ ಎಂಬಲ್ಲಿ ಯಾವ ಅನುಮಾನವೂ ಇಲ್ಲ. ಯೂರೋಪಿನ ಎಡಪಂಥ ಆಯಾ ಸಮಾಜದ ಅಗತ್ಯವಾಗಿದ್ದು ಭಾರತದ ಅತಿ ತಳಮಟ್ಟದ ಆರ್ಥಿಕ ದುಸ್ಥಿತಿಗೆ ಅರೆ ಸಾಮ್ಯತೆ ಹೊಂದಿದೆ ಎನ್ನಬಹುದು. ಹಾಗೆಯೆ ಅಲ್ಲಿನ ಸಮಾಜವಾದ ಮತ್ತು ಸಮಾನತೆಯ ಕಲ್ಪನೆ ಏಕ ರಾಷ್ಟ್ರ, ಏಕ ಭಾಷೆ, ಏಕ ಜನಾಂಗ  ಚಿಂತನೆಯನ್ನು  ಅಡಕಗೊಳಿಸಿಕೊಂಡಿದ್ದು ಇಲ್ಲಿ ಬಹು ಭಾಷೆ, ಬಹು ಸಂಸ್ಕೃತಿ, ಬಹು ಸಮುದಾಯ ಮತ್ತು ಏಕ ರಾಷ್ಟ್ರ ಕಲ್ಪನೆಗೆ ಒಗ್ಗುವುದಿಲ್ಲ. ಹಾಗಾಗಿ 'ಖಡ್ಗವಾಗಲಿ ಕಾವ್ಯ' ಎಂಬ ಕಲ್ಪನೆ  ಮತ್ತೊಂದು ಸಮುದಾಯದಿಂದ ಕೀಳಾಗಿ ಕಾಣುವ ಸಮುದಾಯಕ್ಕೆ ಮಾರಣಾಂತಿಕ ಪೆಟ್ಟು ಬೀಳುವ ಸಾಧ್ಯತೆಯಿತ್ತು. ಇದನ್ನು ತುಂಬ ಗಂಭೀರವಾಗಿ ಸ್ವೀಕರಿಸಿದ್ದಲ್ಲಿ ಬಹು ಸಮುದಾಯಗಳ ನಡುವಿನ ಏರ್ಪಾಟು ಮರು ಏರ್ಪಾಟಿಗೆ ಒಳಪಡುವ ಬದಲು ಅರಾಜಕತೆ ಮತ್ತು ಆಂತರಿಕ ಯುದ್ಧಕ್ಕೆ ಕಾರಣವಾಗಬಹುದಿತ್ತು. ಹಾಗೆ ಎಡಪಂಥದಲ್ಲಿ ತೀವ್ರ ನಿಷ್ಟೆ ತಾಳಿದ ಚಳವಳಿಗಳಿಗೆ ಉಗ್ರವಾದದ ಹಣೆಪಟ್ಟಿ ಕಟ್ಟಿ ದಮನಿಸಲಾದ ನಿದರ್ಶನವಾಗಿ ನಕ್ಸಲೈಟ್ ಚಳವಳಿ ನಮ್ಮ ಮುಂದಿದೆ. ಆದರೆ ದಲಿತ-ಬಂಡಾಯ ಸಾಹಿತ್ಯ ಚಳವಳಿ ತನ್ನ ಆಶಯಗಳನ್ನು ಸಾಮಾಜಿಕ ಬದ್ಧತೆಯ ಕಲ್ಪನೆಯಡಿ ಪ್ರತಿಪಾದಿಸಿ  ಸಾಮಾಜಿಕ ಪರಿವರ್ತನೆಗೆ ಮೂಲವಾದ ವಿಚಾರವಾದದ ಬೆಳವಣಿಗೆಗೆ ಪ್ರೇರಕವಾಯಿತು. ಈ ಚಳವಳಿಯ ಮುಂಚೂಣಿಯಲ್ಲಿದ್ದವರಿಗೆ ಸಾಮಾಜಿಕ ಮಾನ್ಯತೆ ಮತ್ತು ಅಧಿಕಾರದ ಸ್ಥಾನಮಾನಗಳನ್ನು ನೀಡಿದ ಶ್ರೇಣೀಕೃತ ಸಮಾಜ ಅಬಾಧಿತವಾಗಿ ಮುಂದುವರೆಯುವ ಅವಕಾಶವನ್ನೂ ಪಡೆದುಕೊಂಡಿತು. ಇದರ ಹಿಂದೆ ಆಗ ಅಗೋಚರವಾಗಿದ್ದರೂ ಸಕ್ರಿಯವಾಗಿದ್ದ ಮಧ್ಯಮವಾದಿಗಳ ನಿಲುವು ಕಡೆಗಣಿಸುವಂಥದ್ದಲ್ಲ. ಈ ಮಧ್ಯಮ ವಾದಿಯೊಬ್ಬನ ನಿಲುವು ಮೇಲಿನ ಟಿಪ್ಪಣಿಯಲ್ಲಿ ಪ್ರತಿಪಾದಿತವಾಗಿರುವಂತೆ ನನಗೆ ಈಗ ಕಾಣುತ್ತದೆ. ಹಾಗಾಗಿಯೆ ಸೃಜನಶೀಲತೆಯನ್ನು ಮಾನವೀಯ ನೆಲೆಯಲ್ಲಿ ನಡೆಯುವ ಜೀವನ ಮೌಲ್ಯಗಳ ಪಲ್ಲಟವೆಂದೂ ಅರಾಜಕತೆ ಮತ್ತು ಹಿಂಸೆಗೆ ಮೂಲವಾದ ಕ್ರಾಂತಿಯಲ್ಲವೆಂದೂ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.     
ಸೃಜನಶೀಲತೆಯೆಂದರೆ ಸಾಹಿತ್ಯ/ಕಲಾ ಚಳವಳಿಯೊಂದರ ವಸ್ತು, ಶೈಲಿ, ವಿಧಾನಗಳಲ್ಲಿ ತಲೆದೋರಿದ ಸಿದ್ಧ ಮಾದರಿಯನ್ನು ನಿರಾಕರಿಸದೆ, ಕೆಡವದೆ ಕಲೆಯ ಹೊಸ ಸಾಧ್ಯತೆಯನ್ನು ಕಂಡುಕೊಳ್ಳಲು, ಕಟ್ಟಲು ಸಾಧ್ಯವಿಲ್ಲ; ಚಲನಶೀಲತೆಯನ್ನು ಸಾಧಿಸಲು ಆಗುವುದಿಲ್ಲ ಎಂಬ ಸರಳ ನೋಟದಿಂದ ಹೇಮಂತ ಕುಲಕರ್ಣಿಯವರು ದ್ಯಾದಾಯಿಜಮ್ ಆಂದೋಲನವನ್ನು ವಿವರಿಸಿದ್ದಾರೆ. ಇದನ್ನೇ ನಾನು ಭಾರತೀಯ ಸಾಮಾಜಿಕ ಸಂದರ್ಭದ ನಿಟ್ಟಿನಿಂದ ನೋಡಿ ಪ್ರತಿಕ್ರಿಯೆ ನೀಡಿದ್ದೇನೆ. ಹಾಗಾಗಿಯೆ ಸೃಜನಶೀಲ ಕ್ರಿಯೆ ಮತ್ತು ಸಾಮಾಜಿಕ ಸಂಬಂಧಗಳು ಪರಸ್ಪರ ಪರಿಣಾಮ ಬೀರುವ ಹಾಗೂ ಅನ್ಯೋನ್ಯ ಸಂಬಂಧವಿರುವ ಅಂಶಗಳಾಗಿ ನನಗೆ ಕಂಡಿದೆ. 

ಗುರುವಾರ, ಮೇ 26, 2011

ಮಾಸ್ತಿಯವರದೊಂದು ಕತೆ ಕುರಿತು ಟಿಪ್ಪಣಿ

1994ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರಿನಲ್ಲಿ `ಅನ್ಯಜ್ಞಾನಶಿಸ್ತುಗಳ ಮೂಲಕ ಕನ್ನಡ ಸಾಹಿತ್ಯ' ಎಂಬ ಕಮ್ಮಟವನ್ನು ಏರ್ಪಡಿಸಿತ್ತು. ಅದರಲ್ಲಿ ಭಾಗವಹಿಸಿದ್ದ ನಾನು ಮನಶಾಸ್ತ್ರ ಮತ್ತು ಸಾಹಿತ್ಯದ ಹಿನ್ನೆಲೆಯಲ್ಲಿ ಟಿಪ್ಪಣಿಯೊಂದನ್ನು ಸಿದ್ಧಪಡಿಸಿದ್ದೆ. ನಂತರ ಅಕಾಡೆಮಿ ಕಮ್ಮಟ ಕುರಿತು ಪ್ರಕಟಿಸಿದ ಪುಸ್ತಕದಲ್ಲಿ ಸೇರಿಕೊಂಡಿತು. ಅದನ್ನಿಲ್ಲಿ  ತುಸು ಬದಲಾವಣೆಯೊಂದಿಗೆ ಮತ್ತೆ ನಿಮ್ಮ ಮುಂದಿರಿಸುತ್ತಿದ್ದೇನೆ. 
#

ಮಾಸ್ತಿ ಅವರ `ಗೌತಮಿ ಹೇಳಿದ ಕತೆ' 

ಈ ಕತೆಯ ವಿನ್ಯಾಸ ಗೌತಮಿ ನಿರೂಪಿಸುವ ಕತೆಯ ಹಿಂದೆ ಕೆಲಸ ಮಾಡುವ ನಿರೂಪಕಿಯ ಮನಸ್ಸನ್ನು ಚಿತ್ರಿಸುತ್ತದೆ. ಗೌತಮಿ ಕತೆ ನಿರೂಪಿಸಲು ಪ್ರೇರಿತಳಾಗಿದ್ದಾಳೋ ಇಲ್ಲವೆ ಪ್ರೇರಕ ಸ್ಥಾನದಲ್ಲಿ ನಿಂತು ಕತೆ ಹೇಳುತ್ತಿದ್ದಾಳೋ ನಿರ್ದಿಷ್ಟವಾಗಿ ಕಂಡುಕೊಳ್ಳುವುದು ಸುಲಭವಲ್ಲ ಎನ್ನುವ ಹಾಗೆ ಕತೆಯನ್ನು ಮಾಸ್ತಿ ಹೆಣೆದಿದ್ದಾರೆ.

ಶಕುಂತಲೆ ತನ್ನ ಮಗು ಭರತನೊಂದಿಗೆ ಆಶ್ರಮಕ್ಕೆ ಭೇಟಿ ನೀಡಿದ್ದಾಳೆ ಎನ್ನುವ ಒತ್ತಿನೊಂದಿಗೆ ಕತೆ ಆರಂಭವಾಗುತ್ತದೆ. ಆ ಕಾಲಕ್ಕೆ ಅವಳ ಸಖಿಯರಾದ ಅನಸೂಯ ಮತ್ತು ಪ್ರಿಯಂವದೆಯರಿಗೂ ಮದುವೆಯಾಗಿದೆ. ಅವರೂ ಮಕ್ಕಳನ್ನು ಪಡೆದು ತಾಯಂದಿರಾಗಿದ್ದಾರೆ. ಒಂದು ಕಡೆ ಶಕುಂತಲೆಯ ಬದುಕು ಸಂಸಾರದ ನೆಲೆಯಲ್ಲಿ ಎದುರಿಸಿದ ಎಲ್ಲ ಬಗೆಯ ಗಂಡಾಂತರಗಳನ್ನು ಕಂಡಿದ್ದರೂ ಅದನ್ನು ದಾಟಿದೆ, ಎಂದೋ ನಿರಾತಂಕ ಸ್ಥಿತಿಯನ್ನು ತಲುಪಿದ್ದು ನಿರಾಳತೆಯಿಂದ ಸಾಗುತ್ತಿದೆ.  ಮತ್ತೊಂದೆಡೆ ಅವಳ ಸಖಿಯರೂ ಅಶ್ರಮದ ಹೆಣ್ಣುಮಕ್ಕಳೂ ಆದ ಅನಸೂಯ ಮತ್ತು ಪ್ರಿಯಂವದೆಯರ ಬದುಕು ಹಾದಿ ತಪ್ಪದೆ ಸುಭದ್ರ ಸ್ಥಿತಿಯನ್ನು ಮುಟ್ಟಿದೆ. ಮುದುಕಿಯಾಗಿರುವ ಗೌತಮಿ, ಶಕುಂತಲೆ ಮತ್ತು ಅವಳ ಸಖಿಯರಂತೆ ಆಶ್ರಮಕ್ಕೆ ಅನಾಥ ಮಕ್ಕಳಂತೆ ಬಂದಿದ್ದು ಇವರೆಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಏರು ಪೇರು ಕಂಡವರೇ ಅಗಿದ್ದಾರೆ. ಅಲ್ಲದೆ ಕತೆ ಜರುಗುವ ಹೊತ್ತಿಗೆ ಸಂತೃಪ್ತ ಬದುಕಿನ ನೆಲೆಯನ್ನು ತಲುಪಿದ್ದಾರೆ.  ಗೌತಮಿ ಸಂತಸದ ಮನಸ್ಥಿತಿಯಲ್ಲಿದ್ದಾಳೆಂದು ಕತೆಯ ಮೊದಲ ಹಂತದಲ್ಲಿ ವಿವರಣೆ ದೊರಕುತ್ತದೆ. ಆಕೆಯ ಮನಸ್ಥಿತಿಗೆ ಶಕುಂತಲೆ ಆಶ್ರಮಕ್ಕೆ ಭೇಟಿ ನೀಡಿರುವುದು ಅಥವಾ ಶಕುಂತಲೆಯ ಬದುಕಿನ ಹಿನ್ನೆಲೆಯಲ್ಲಿ ತನಗೆ ತನ್ನದೆ ಕತೆ ನಿರೂಪಿಸಲು ಸಂದರ್ಭ ಒದಗಿರುವುದು ಕಾರಣವಿರಬಹುದು. ಶಕುಂತಲೆ ದುಷ್ಯಂತನನ್ನು ವರಿಸಿ ಹೋದಮೇಲೆ ಗೌತಮಿ ಅನಸೂಯ ಮತ್ತು ಪ್ರಿಯಂವದೆಯರಿಗೆ ಒತ್ತಾಯ ಮಾಡಿ ಮದುವೆಗೆ ಒಪ್ಪಿಸಿರುತ್ತಾಳೆ. ಗೌತಮಿ ತಾನೇಕೆ ಹಾಗೆ ನಡೆದುಕೊಂಡೆನೆಂದು ಹೇಳಲು ಶಕುಂತಲೆಯ ಸಖಿಯರಿಗೆ ಕತೆಯ ಮೂಲಕ ವಿವರಿಸತೊಡಗುತ್ತಾಳೆ. ಈ ಕತೆಯನ್ನು ಗೌತಮಿ ಈ ಮೊದಲೆ ಬೇರೆ ಯಾವ ಸಂದರ್ಭದಲ್ಲಿಯಾದರೂ ಹೇಳಬಹುದಿತ್ತು. ಆದರೆ ಆಕೆ ಹೇಳಿರಲಿಲ್ಲ. ಬದುಕಿನಲ್ಲಿ ತೊಡಕನೆದುರಿಸಿದ ಅಸ್ಥಿರ ಘಟ್ಟದಿಂದ ಎಲ್ಲ ಪಾತ್ರಗಳು ಮೇಲೆ ಬಂದು ನೆಮ್ಮದಿಯ ಸ್ಥಿತಿಯಲ್ಲಿರುವುದು ಗೌತಮಿ ನಿರೂಪಿಸುವ ಕತೆಯನ್ನು ಎಲ್ಲ ಪಾತ್ರಗಳೂ ನಿರ್ಲಿಪ್ತವಾಗಿ ದೂರದಿಂದ ನೋಡಲು ಮತ್ತು ಸ್ವೀಕರಿಸಲು ಸಾಧ್ಯವಾಗುವ ಮಾನಸಿಕ ವಾತಾವರಣ ರೂಪಿಸಲು ಕಾರಣವಾಗಿದೆ. ಇಂತಹ ಸ್ಥಿತಿಯಲ್ಲೂ ಗೌತಮಿ ತನ್ನ ಕತೆಯನ್ನು ಮತ್ತೊಬ್ಬರ ಕತೆಯಂತೆ ನಿರೂಪಿಸುತ್ತಾಳೆ.

ಅನಾಥೆಯಾಗಿ ಬಂದು ಸೇರಿದ್ದ ಆಶ್ರಮದ ಮತ್ತೊಬ್ಬ ಹುಡುಗಿ ಮಾಲಿನಿಯ ಕತೆಯೆಂಬಂತೆ ಗೌತಮಿ ತನ್ನ ಕತೆಯನ್ನು ಹೇಳುತ್ತಾಳೆ. ಒಂಬತ್ತು ಹತ್ತು ವರುಷದ ಮಾಲಿನಿ ಆಶ್ರಮದ ಮುಕ್ತ ವಾತಾವರಣದಲ್ಲಿ ಗಂಡು ಹೆಣ್ಣು ಎಂಬ ಭೇದಭಾವದ ಅರಿವಿಲ್ಲದೆ ತನ್ನ ಓರಗೆಯ ಹುಡುಗರಾದ ಭಾರದ್ವಾಜ ಮತ್ತು ದತ್ತ ಕಶ್ಯಪರೊಡನೆ ಬೆರೆತು ಬೆಳೆಯುತ್ತಾಳೆ. ಮದುವೆಯ ಮಾತಿಗೆ ಅವಳು ಸಮರ್ಥನೂ ಬಲಿಷ್ಟನೂ ಆಗಿ ಕಂಡುಬಂದಿದ್ದ ಭಾರದ್ವಾಜನ ಕಡೆಗೆ ಒಲಿಯುತ್ತಾಳೆ. ಒಮ್ಮೆ ಹೊಳೆಯ ಪ್ರವಾಹದಲ್ಲಿ ಈಜುತ್ತಿದ್ದ ಭಾರದ್ವಾಜ ಆಕಸ್ಮಿಕವಾಗಿ ತೇಲಿ ಬರುತ್ತಿದ್ದ ಮರಕ್ಕೆ ಸಿಲುಕಿ ಸಾಯುತ್ತಾನೆ. ಭಾರದ್ವಾಜನ ಸಾವಿನಿಂದ ತನ್ನ ಬದುಕು ದಿಕ್ಕು ಕೆಟ್ಟಿದ್ದನ್ನು ಅರಿತ ಮಾಲಿನಿ ಒಂದು ದಿನ ಹೊಳೆಗೆ ಹಾರುತ್ತಾಳೆ. ಹೊಳೆಯ ತುಂಬು ನೀರಿನಿಂದ ಅವಳನ್ನು ದತ್ತ ಹೊರಹಾಕುತ್ತಾನೆ. ಅಲ್ಲಿಂದ ಅವಳ ಮನಸ್ಸು ದತ್ತನನ್ನು ಪಡೆಯಲು ಹವಣಿಸುತ್ತದೆ. ಅರಿವಿಲ್ಲದೆ ಭಾರದ್ವಾಜನಲ್ಲಿ ಪಡೆದುಕೊಂಡದ್ದನ್ನು ಮಾಲಿನಿ ಅವನ ಸಾವಿನಿಂದ ಇದ್ದಕ್ಕಿದ್ದ ಹಾಗೆ ಕಳೆದುಕೊಂಡ ಮೇಲೆ ತನ್ನ ಜೀವನದ ಆಧಾರವನ್ನೆ ತಾನು ಕಳೆದುಕೊಂಡೆನೆಂದು  ಹೊಳೆಗೆ ಹಾರಲು ಹೊರಡುತ್ತಾಳೆ. ನಂತರ ತನ್ನ ಜೀವ ಉಳಿಸಿದ ದತ್ತನಲ್ಲಿ ತನ್ನ ನೆಚ್ಚಿನ ಜೀವವನ್ನು ತಣಿಸಿ, ತನಗೆ ಬದುಕು ಕೊಡುವ ಗಂಡನನ್ನು ಕಾಣುತ್ತಾಳೆ. ದತ್ತನನ್ನು ಬಯಸಿ ತನ್ನವನನ್ನಾಗಿ ಪಡೆಯಲು ಪ್ರಯತ್ನಿಸುತ್ತಾಳೆ. ಆಶ್ರಮದ ಮುಂದಣ ಕುಲಪತಿಯಾಗಲಿರುವ ದತ್ತ ತಾನು ಪತಿತನಾಗಬಾರದೆಂಬ ಮನಸ್ಥಿತಿ ಅವನದಾಗಿತ್ತೆಂದೂ ಆದರೆ ಅವನಲ್ಲಿ ಮಾಲಿನಿ ಕುರಿತು ಸುಪ್ತ ಬಯಕೆಯಿತ್ತೆಂದೂ ಗೌತಮಿ ಚಿತ್ರಿಸುತ್ತಾಳೆ. ಇಂಥ ಮನಸ್ಥಿತಿಯಲ್ಲಿದ್ದ ದತ್ತನ ತಲೆಯನ್ನು ತನ್ನ ಎದೆಯ ಬಳಿ ಸೆಳೆದುಕೊಳ್ಳಲು ಮಾಲಿನಿ ಕೈ ಚಾಚುತ್ತಾಳೆ. ಆಗ ದತ್ತ ಕಶ್ಯಪ ದಂಡದಂತೆ ನೆಲದ ಮೇಲೆ ಬಿದ್ದು ಅವಳ ಕಾಲುಗಳೆರಡನ್ನೂ  ತನ್ನೆರಡು ಕೈಗಳಿಂದ ಹಿಡಿದು ಅವಳಿಗೆ ಶರಣಾಗತನಾಗಿ ಅಂಗಲಾಚಿ ದೈನ್ಯದಿಂದ ತನ್ನನ್ನು ಕಾಪಾಡಲು ಬೇಡಿಕೊಳ್ಳುತ್ತಾನೆ. ದತ್ತ ಮಾಲಿನಿಗೆ ತನ್ನ ತೋಳನಲ್ಲಿ ಅಪ್ಪಿ ಹಿಡಿಯಬೇಕಾದವನು ಆಗಿದ್ದ. ಆದರೆ ಆತ ನಿಸ್ಸಹಾಯಕ ಬಾಲಕನಂತೆ ಕಾಪಾಡಲು ಅವಳನ್ನು ಬೇಡಿದಾಗ ಆಕೆ ತಾಯಿಯಂತೆ ಅವನನ್ನು ಕಾಣಲು ತೊಡಗುತ್ತಾಳೆ.  ಮಾಲಿನಿಯೇ ಗೌತಮಿ, ದತ್ತ ಕಶ್ಯಪನೇ ಕಣ್ವ ಮಹರ್ಷಿಯೆಂದು ಕತೆಯ ಕೊನೆಯ ಹಂತದಲ್ಲಿ ಪಾತ್ರಗಳ ಪರಸ್ಪರ ಮಾತುಕತೆಯ ಮೂಲಕ ತಿಳಿದುಬರುತ್ತದೆ.

ಈ ಕತೆಯ ನಿರೂಪಕಿ ಮತ್ತು ಕೇಂದ್ರ ಪಾತ್ರಧಾರಿ ಗೌತಮಿಯೇ ಅಗಿದ್ದು ಅವಳ ಕಣ್ಣುಗಳಿಂದ ಗ್ರಹಿಸಿದ ಕತೆಯಂತೆ ಮಾಸ್ತಿ ಕತೆ ಮಂಡಿಸಿದ್ದಾರೆ. ಕತೆಯ ಪ್ರಾರಂಭದಲ್ಲಿ ವಿವರಿಸಲಾಗಿರುವ ಆಕೆಯ ಸಂತಸ,  ಕೇವಲ ಕತೆ ಹೇಳಿಕೊಳ್ಳುವುದರಲ್ಲಿ ಕಾಣುವ ಹಂತವೋ ಅಥವಾ ಆಕೆ ತನ್ನ ಕತೆಯ ಮೂಲಕ ತನ್ನ ಕಣ್ಣ ಮುಂದಿನ ಹೆಣ್ಣುಮಕ್ಕಳಿಗೆ ಹೀಗಾಗಬಾರದು ಎಂಬ ನೀತಿಕತೆ ಹೇಳುವ ಸ್ಥಿತಿಯೋ ಇಲ್ಲವೆ ಸಕುಂತಲೆಯ ಬದುಕಿನ ಹಿನ್ನೆಲೆಯಲ್ಲಿ ತನ್ನ ಜೀವನ ಅರಿಯಲು ಕತೆಯನ್ನು ಹೆಣೆದ ಮನಸ್ಥಿತಿಯೋ, ಹೇಗೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾರದಷ್ಟು ಕತೆ ಸಂಕೀರ್ಣವಾಗಿದೆ. ಆದರೂ ಮಾಸ್ತಿಯವರ ಈ ಕತೆ ಒಬ್ಬರಿಗೊಬ್ಬರು ಎದುರಾದಾಗ ಮತ್ತೊಬ್ಬರ ಮೂಲಕ ತನ್ನನ್ನು ಕಂಡುಕೊಳ್ಳಬಹುದಾದ ಮಾನಸಿಕ ಸ್ಥಿತಿಯನ್ನು ಚಿತ್ರಿಸುವ ಚೌಕಟ್ಟಿನಲ್ಲಿದೆ.