ವಚನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ವಚನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಮೇ 1, 2011

1996ರಲ್ಲಿ ಸಂಚಯ ಪ್ರಕಟಿಸಿದ ನನ್ನ ಬರೆಹ

ಬಸವಣ್ಣನ ಒಂದು ವಚನ


ಉಳ್ಳವರು ಶಿವಾಲಯ ಮಾಡುವರು
ನಾನೇನ ಮಾಡಲಿ ಬಡವನಯ್ಯ
ಎನ್ನ ಕಾಲೇ ಕಂಭ ದೇಹವೇ ದೇಗುಲ
ಶಿರ ಹೊನ್ನ ಕಳಸವಯ್ಯ
ಅಯ್ಯಾ ಕೂಡಲ ಸಂಗಮದೇವ ಕೇಳಯ್ಯ
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ

ಈ ವಚನದ ಕೊನೆಯ ಸಾಲಿನಲ್ಲಿ ಬಸವಣ್ಣ ಸ್ಥಾವರ ಮತ್ತು ಜಂಗಮ ಚಿಂತನಾ ರೂಪಗಳನ್ನು ಕಟ್ಟಿಕೊಟ್ಟಿದ್ದಾನೆ. ಇವೆರಡರ ನಡುವೆ ಇರುವ ತಾರತಮ್ಯ ಪ್ರಜ್ಞೆಯನ್ನು ಖಚಿತ ಪಡಿಸಿ, ಮೌಲ್ಯ ಪರವಾದ ತನ್ನ ನಿಖರ ನಿಲುವನ್ನು ಸ್ಪಷ್ಟಪಡಿಸಿದ್ದಾನೆ. ಇದಕ್ಕಾಗಿ ಒಂದು ಸಾಮಾಜಿಕ ಪ್ರತಿಮೆಯನ್ನು ಬಳಸಿದ್ದಾನೆ. ಆ ಮೂಲಕ ತರತಮ ಭಾವ ಮತ್ತು ಅದರ ಪ್ರಜ್ಞೆಯನ್ನು ಖಚಿತವಾಗಿ ಬೆಳೆಸಿದ್ದಾನೆ. ಉಳ್ಳವರು ಮತ್ತು ಬಡವರು ಎಂಬ ಸಾಮಾಜಿಕ ವರ್ಗಗಳನ್ನು ಒಳಗೆ ತಂದಿರಿಸಿಕೊಂಡಿದ್ದಾನೆ. ಉಳ್ಳವರೆಂದರೆ, ಸಮಾಜದಲ್ಲಿ ಮೇಲುಜಾತಿಯನ್ನು ಹುಟ್ಟಿನಿಂದ ಪಡೆದವರು, ವಿದ್ಯೆ ಮತ್ತು ಅಧಿಕಾರದ ಸ್ಥಾನಮಾನಗಳನ್ನು ಪಡೆದವರು, ಇವೆರಡರ ಬಲದಿಂದ ಸಮಾಜಿಕ ಸ್ಥಾನಮಾನ, ಧಾರ್ಮಿಕ ಸ್ಥಾನಮಾನ, ಅಧಿಕಾರ, ಇವೆಲ್ಲದರ ಬಲದಿಂದ ಧನ-ಧಾನ್ಯಗಳನ್ನು ಹೇರಳವಾಗಿ ಹೊಂದಿದವರು. ಸಮಾಜದ ಎಲ್ಲ ಬಲಗಳನ್ನು ತಮ್ಮ ಕೈ ವಶ ಮಾಡಿಕೊಂಡವರು ಅರ್ಥಾತ್ ಯಜಮಾನ ಸ್ಥಾನದಲ್ಲಿರುವವರು. ಉಳ್ಳವರು  ಚಿಂತನಾ ರೂಪಕ್ಕೆ ಬದಲಾಗಿ ಬಸವಣ್ಣ ಬಡವರು ಚಿಂತನಾ ರೂಪವನ್ನು ಚಲಾವಣೆಗೆ ತಂದಿದ್ದಾನೆ. ಬಡವರೆಂದರೆ  ಉಳ್ಳವರು ಹೊಂದಿರುವುದನ್ನು ಪಡೆದುಕೊಳ್ಳಲಾಗದ ಬಲಹೀನರು, ದೀನರು. ಈ ಬಡವನಲ್ಲಿ ಲೌಕಿಕ ಸುಖ   ಸಾಧನಗಳ ಸವಲತ್ತುಗಳಿಲ್ಲ, ಆದರೆ ಸಮೃದ್ಧ ಭಾವ ಜೀವನ, ಸರಳತೆ, ಮುಗ್ಧತೆ, ನೆಮ್ಮದಿ, ವಿಕಾರವಲ್ಲದ ಸೀದಾ-ಸಾದಾ ಮೊದಲಾದ ತನ್ನತನಗಳಿವೆ.   
ಲೌಕಿಕ ಸವಲತ್ತುಗಳನ್ನುಳ್ಳ, ವ್ಯವಹಾರ ಬಲ್ಲ ಉಳ್ಳವರು ಕಲ್ಲುಮಣ್ಣಿನ ಶಿವಾಲಯ-ದೇವಾಲಯ ಕಟ್ಟಿಸಬಲ್ಲರು ಮತ್ತು ಇಂಥ ಕಲ್ಲು ಮಣ್ಣಿನ ಕಟ್ಟಡದ ಹಕ್ಕು-ಅಧಿಕಾರ ಪಡೆಯಬಲ್ಲರು, ತಮ್ಮ ಹುಸಿ ಘನತೆ, ಗೌರವ, ದೊಡ್ಡಸ್ಥಿಕೆ ಮೆರೆಯಬಲ್ಲರು. ಇದು ಉಳ್ಳವರ ಉಪಭೋಗ ಮತ್ತು ಲೌಕಿಕ ಜೀವನದ ಮೂಲ ಅಂಗ. ಆದರೆ ಬಡವರು ಶಿವಾಲಯವನ್ನು ಹೇಗೆ ಒಳಹೋಗಬಲ್ಲರು? ಬಡವನಿಗೆ ಶಿವಾಲಯದ ಹಕ್ಕು, ಅಧಿಕಾರ, ಒಳ ಹೊಕ್ಕುವ ಹಕ್ಕು ಉಪಭೋಗ ಜೀವನೂ ಅಲ್ಲ, ವ್ಯಾವಹಾರಿಕ ಜೀವನವೂ ಅಲ್ಲ. ಅದೊಂದು ಆನುಭಾವಿಕ ಕ್ರಿಯೆ. ಅಂತರಂಗ ಮತ್ತು ಬಹಿರಂಗ ಜೀವನವನ್ನು ತೊಳೆದು ಶುಚಿ ಮಾಡುವುದು, ಅದಕ್ಕಾಗಿ ವಿಶ್ವ ಚೇತನದ ಮೊರೆ ಹೋಗುವುದು ಅಥವಾ ಆ   ಚೇತನವನ್ನು ತನ್ನೊಳಗೆ ಆವಾಹಿಸಿಕೊಳ್ಳುವುದು ಆಗಿದೆ. ಹೀಗೆ ಉಳ್ಳವರು ಮತ್ತು ಬಡವರು ತಮ್ಮದೇ ಆದ ಬೇರೆ ಬೇರೆ ನೆಲೆಗಳಲ್ಲಿ ಶಿವಾಲಯ ಮಾಡುತ್ತಾರೆ.
ಬಸವಣ್ಣನ ಕಾಲದಲ್ಲಿ ಉಳ್ಳವರು ಶಿವಾಲಯ ಮಾಡುವುದು ರೂಢಿಯಲ್ಲಿತ್ತು. ಅದಕ್ಕೆ ವಿರುದ್ಧವಾಗಿ ಬಡವರೂ ಶಿವಾಲಯ ಮಾಡುವುದನ್ನು ರೂಢಿಗೆ ತರಬೇಕಿತ್ತು. ಉಪಭೋಗ ಜೀವನದ ಸ್ಥಾನದಲ್ಲಿ ಸ್ವಾನುಭವದ ಅಂತಸ್ಥ ಜೀವನ ಕ್ರಮವನ್ನು ಚಾಲ್ತಿಗೆ ತರಬೇಕಿತ್ತು. ಇಂಥ ಸಂದರ್ಭದಲ್ಲಿ 'ನಾನೇನು ಮಾಡಲಿ ಬಡವನಯ್ಯ' ಎಂದು ಬಸವಣ್ಣ ಅಸಹಾಯತನದ ಉದ್ಗಾರ ಮಾಡಿದ್ದಾನೆ. ಬಡವರು ಶಿವಾಲಯ ಮಾಡುವ ಕ್ರಮದ ಮೇಲೆ ಒತ್ತು ಹಾಕಿದ್ದಾನೆ.
ಈ ವಚನದ ನಾಯಕ 'ನಾನು'- ಬ್ರಾಹ್ಮಣ ಕುಲದಲ್ಲಿ ಹುಟ್ಟಿದವನೂ ಬಿಜ್ಜಳನ ಆಸ್ಥಾನದಲ್ಲಿ   ಭಂಡಾರಿಯಾಗಿದ್ದವನೂ ಎಲ್ಲ ಬಗೆಯ ಸ್ಥಾನಮಾನ ಗೌರವಾದರಗಳನ್ನು ಪಡೆಯುತ್ತಿದ್ದನೂ ಆದ ಬಸವಣ್ಣನಲ್ಲ; ಮೂಲಭೂತ ಸವಲತ್ತುಗಳಿಂದಲೂ ವಂಚಿತರಾಗಿ ಲೌಕಿಕ ಜೀವನ ನರಕವಾಗಿದ್ದ ಸಮಾಜದ ಬಲಹೀನ, ದೀನ ದಲಿತರ ಸಾಂಸ್ಕೃತಿಕ ಚಳವಳಿಯ ನೇತಾರನಾಗಿದ್ದ ಬಸವಣ್ಣ. ಹಾಗಾಗಿ ಲೌಕಿಕ ಸಲತ್ತುಗಳಿಲ್ಲದೆ ನರಕ ಜೀವನ ನಡೆಸುತ್ತಿರುವ ಬಡವನಿಗೆ ಇಲ್ಲಿ ಎಚ್ಚರಿಕೆ ಇದೆ. ಲೌಕಿಕವಾಗಿ ಬಡವನಾಗಿದ್ದೂ ಅಲೌಕಿಕವಾಗಿ ನಡೆಸಬಹುದಾದ ಸುಖ ಜೀವನದ  ಹೊಸ ಹಾದಿಯ ಕಡೆಗೆ ಗಮನ ಸೆಳೆಯಲಾಗಿದೆ.
ಇದು ಲೌಕಿಕ ಸವಲತ್ತುಗಳಿಲ್ಲದ ಬಡವನಿಗೆ ಆತ್ಮವಿಶ್ವಾಸ, ಸ್ವಾಭಿಮಾನ ಮೂಡಿಸುವ ಅಂತಸ್ಥ ಶಕ್ತಿಯ ಕಡೆ ತೋರುಬೆರಳಾಗಿದೆ. ಇದಕ್ಕೆ ಲಗತ್ತಾಗಿ 'ಕಾಲೇ ಕಂಭ ದೇಹವೇ ದೇಗುಲ ಶಿರಹೊನ್ನ ಕಳಸವಯ್ಯ' ಎಂಬ ಸಾಲು ಇದೆ. ಕಾಯದಿಂದ ಬಂದ ಕಾಯಕವನ್ನು ಮಾಡುವ ಕಾಯದ ಶಿವಾಲಯ  ಪರಿಯನ್ನು ಎತ್ತಿ ಹೇಳಿದ್ದಾನೆ. ಶಿವಾಲಯ ಮಾಡುವ ಸುಖದ ಲೋಕ ಕಾಯಕ ಮಾಡುವ ಕಾಯದಲ್ಲೇ ಅಡಗಿರುವುದನ್ನು ಬಿಚ್ಚಿ ತೋರಿದ್ದಾನೆ. ಜಗತ್ತಿನ ಸೃಷ್ಟಿ ಚೈತನ್ಯವೆಲ್ಲ ಮಾನವನ ಅಳತೆಗೆ ಮೀರದ ಅವನ ದೇಹದಲ್ಲೇ ಇರುವುದನ್ನು ದೇಹವೇ ದೇಗುಲ ಕಲ್ಪನೆಯ ಮೂಲಕ ಕಾಣಿಸಿದ್ದಾನೆ. ಅಂದರೆ ಈ ಜಗತ್ತನ್ನು ನಡೆಸುವ ಹಾಗೂ ಮಾನವನ ಅಳವಿಗೆ ಮೀರಿದ ದೈವಶಕ್ತಿಯನ್ನು ಮಾನವನ ಕಾಯದಲ್ಲೆ ಕಂಡುಕೊಳ್ಳಲಾಗಿದೆ. ಈ ಸಾಲು ನಾಥ ಪಂಥದ ಮೂಲ ತಿರುಳನ್ನು ಎತ್ತಿ ಹೇಳುವ ಪದಗುಚ್ಚಗಳಿಂತಿದೆ. ಈ ಜಗತ್ತಿನ ಸೃಷ್ಟಿ ಚೈತನ್ಯವನ್ನು ನಾಥಪಂಥಿಗಳು ತಮ್ಮ ಮೈಯಲ್ಲೇ ಕಂಡುಕೊಳ್ಳುತ್ತಾರೆ. ಆ  ಚೈತನ್ಯ ಸಿದ್ಧಿಗಾಗಿ ತಮ್ಮ ದೇಹದ ಮೇಲೆ ಒಡೆತನ ಸಾಧಿಸಲು ಅನೇಕ ಬಗೆಯ ಸಾಧನೆಗಳ ಮೂಲಕ ಶ್ರಮಿಸುತ್ತಾರೆ. ಬಸವಣ್ಣ ಈ ವಚನದಲ್ಲಿ ನಾಥಪಂಥದ ಸಿದ್ದಾಂತವನ್ನು ಸಾಮಾಜಿಕ ಪ್ರತಿಮೆಯಾಗಿ ಬಳಸಿಕೊಂಡಿದ್ದಾನೆ. ನಾಥ ಪಂಥದ ದೀಕ್ಷೆ ಪಡೆದಿದ್ದ ಅಥವಾ ಅದರ ಪ್ರಭಾವಕ್ಕೆ ಒಳಗಾಗಿದ್ದ ಅಲ್ಲಮ ಪ್ರಭುವಿನ ನಿಕಟ ಸಂಪರ್ಕದಲ್ಲಿ ಬಸವಣ್ಣನಿಗೆ ಇದು ಸರಳ ಸಾಮಾನ್ಯ ಸಂಗತಿಯಾಗಿಯೇ ಇದ್ದು ಅವನ ವಚನದಲ್ಲಿ ಒಳನುಸುಳಿದೆ. ಸ್ಥಾವರ ಮತ್ತು ಜಂಗಮ ಚಿಂತನಾ ರೂಪಗಳು ಪಡಿಮೂಡಿದ್ದೂ ಇದೇ ಮೂಲದಿಂದಲೇ ಇರಬಹುದಾಗಿದೆ. ದೇಹವೇ ದೇಗುಲವಾಗಿರುವ ಮಾನವನ ನಿಜಗುಣವನ್ನು ಅರಹುವ ಮೂಲಕ ಬಸವಣ್ಣ ಸಮಾಜದ ಮೂಢ ನಡೆ ಮತ್ತು ಅರಿವಿನ ನಡೆಗಳ ವ್ಯತ್ಯಾಸ ಮತ್ತು ತಿಳುವಳಿಕೆಯನ್ನು ಮೂಡಿಸಿದ್ದಾನೆ. ಈ ಮೂಲಕ  ಅರಿವಿನ ನಡೆ ಯಾವುದು ಎಂಬುದರ ಬಗ್ಗೆ ಹೊಸಹಾದಿ ತೋರಿಸಿದ್ದಾನೆ.
ಬೌದ್ಧ ಧರ್ಮ ಅವನತಿಯಾಗುತ್ತಿದ್ದ ವೇಳೆಯಲ್ಲಿ ಹುಟ್ಟಿದ ನಾಥಪಂಥ ಅವೈದಿಕ ಪಂಥಗಳಲ್ಲೊಂದು. ಈ ಪಂಥ ಹನ್ನೆರಡನೆಯ ಶತಮಾನದ ನಡೆದ ಚಳವಳಿಯಲ್ಲಿ ತಿಳಿದೊ ತಿಳಿಯದೆಯೊ ಬೇರುಬಿಟ್ಟಿತ್ತು ಎಂಬುದು ಈ ವಚನದಿಂದ ತಿಳಿಯುತ್ತದೆ. ಇಲ್ಲಿನ ನಾಥಪಂಥದ ಆಶಯಗಳು ಇರುವವರ ಮತ್ತು ಇರದವರ ನಡುವೆ ಗೆರೆ ಎಳೆದು ಇಲ್ಲದವರಲ್ಲಿ ಸ್ವಾಭಿಮಾನ, ಆತ್ಮವಿಶ್ವಾಸ ಮೂಡಿಸುವ ಪ್ರಯತ್ನದಲ್ಲಿ ಜಂಗಮ ಚಿಂತನಾ ರೂಪ ಯಶಸ್ವಿಯಾಗಿ ಮೈ ತಳೆದಿದೆ.
ಉಳ್ಳವರು ಶಿವಾಲಯ ಮಾಡುವ ಸ್ಥಾವರ ಧರ್ಮದ ವಿರುದ್ಧ ದೀನರ, ಬಲಹೀನರ, ಕೆಳವರ್ಗದ ಬಡಜನರ ಜಂಗಮ ಧರ್ಮವನ್ನು ಎತ್ತಿಹಿಡಿಯಲಾಗಿದೆ. ಅವೈದಿಕ ನಾಥಪಂಥ ಬಸವಣ್ಣನ ಈ ವಚನದಲ್ಲಿ ಮೈ ಪಡೆದು ಹನ್ನೆರಡನೆಯ ಶತಮಾನದಲ್ಲಿ ನಡೆದ ಚಳವಳಿಯ ಆಶಯಗಳನ್ನು ಬಿಂಬಿಸುವ ಸಾಮಾಜಿಕ ಪ್ರತಿಮೆಯಗಿ ಮೈ ತಳೆದಿದೆ.